ಬೆಂಗಳೂರು: ಹೊಸದಾಗಿ ಮದುವೆಯಾಗಿದ್ದ ಹೆಚ್ ಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟೆಕ್ಕಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಯಲಹಂಕ ನ್ಯೂ ಟೌನ್ ಹತ್ತಿರ ನಡೆದಿದೆ. ಆಕೆಯ ಪತಿ ಮಲ್ಲನಗೌಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಹೂವಿನಹಿಪ್ಪರಗಿ ತಾಲ್ಲೂಕಿನ ಪ್ರತಿಭಾ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಬಿಬಿಎಂಪಿಯಲ್ಲಿ ಗುತ್ತಿಗೆ ನೌಕರನಾಗಿದ್ದ ಮಲ್ಲನಗೌಡ ಎಂಬಾತನನ್ನು ಪ್ರತಿಭಾ ಎರಡು ತಿಂಗಳ ಹಿಂದೆ ವಿವಾಹವಾಗಿದ್ದಳು.
ಸ್ನಾತಕೋತ್ತರ ವ್ಯಾಸಂಗದಲ್ಲಿ ಚಿನ್ನದ ಪದಕ ಗಳಿಸಿದ್ದ ಪ್ರತಿಭಾ ಎಂ.ಕಾಂ ಪದವಿ ಪೂರೈಸಿದ್ದಳು. ನೂತನ ದಂಪತಿ ಯಲಹಂಕ ನ್ಯೂ ಟೌನ್ ನಲ್ಲಿ ವಾಸಿಸುತ್ತಿದ್ದರು.
ಬಿಬಿಎಂಪಿಯಲ್ಲಿ ಖಾಯಂ ಉದ್ಯೋಗವಿರುವುದಾಗಿ ಸುಳ್ಳು ಹೇಳಿ 15 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಕೂಡ ಪಡೆದಿದ್ದರು ಎಂದು ಪ್ರತಿಭಾ ಕುಟುಂಬ ಆರೋಪಿಸಿದ್ದಾರೆ.
ಮದುವೆಯಾದ ನಂತರ ತಾಯಿ ಮನೆಯಿಂದ ಇನ್ನಷ್ಟು ಹಣ ತರುವಂತೆ ಮಲ್ಲನಗೌಡ ಪ್ರತಿಭಾಗೆ ಪೀಡಿಸುತ್ತಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೊನ್ನೆ ಪ್ರತಿಭಾರ ಸಂಬಂಧಿಕರೊಬ್ಬರು ಊರಿನಲ್ಲಿದ್ದ ಆಕೆಯ ಸೋದರ ಪ್ರಶಾಂತ್ ಗೆ ಕರೆ ಮಾಡಿ ಗಂಡ ಹೆಂಡತಿ ಪ್ರತಿದಿನ ಜಗಳ ಮಾಡಿಕೊಳ್ಳುತ್ತಿದ್ದು ಅವರ ಕಲಹ ಬಗೆಹರಿಸುವಂತೆ ಹೇಳಿದ್ದರಂತೆ.
ಅದರಂತೆ ಪ್ರಶಾಂತ್ ಬೆಂಗಳೂರಿಗೆ ಬಂದು ನೋಡಿದಾಗ ಮನೆಯಲ್ಲಿ ತನ್ನ ಸೋದರಿ ಪ್ರತಿಭಾಳ ಶವ ನೇತಾಡುತ್ತಿತ್ತು. ತನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ಎಂದು ಪ್ರಶಾಂತ್ ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಮಲ್ಲನಗೌಡಗೆ ಹುಡುಕಾಟ ನಡೆಸುತ್ತಿದ್ದಾರೆ.ಹೆಚ್ಚಿನ ತನಿಖೆ ನಡೆಯುತ್ತಿದೆ.