ಮೆಟ್ರೋ -2 ಮಾರ್ಗದ ಮರು ಟೆಂಡರ್ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬ ಸಾಧ್ಯತೆ
ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೆಟ್ರೋ ಎರಡನೇ ಹಂತದ ನಾಗವಾರ- ಗೊಟ್ಟಿಗೆರೆ ಮಾರ್ಗದ ನೆಲದಡಿಯ ಕಾರಿಡಾರ್ ಯೋಜನೆಯ ಮರುಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸದಿರಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.
13. 9 ಕಿಲೋಮೀಟರ್ ಉದ್ದದ 6 ಪಥದ ಈ ಯೋಜನೆಗೆ 11,014 ಕೋಟಿ ರೂ ವೆಚ್ಚವಾಗಲಿದೆ. ಇದರ ಕಾರ್ಯಾಚರಣೆ ಆರಂಭಿಸಿದ್ದರೆ, ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆವಿಗೂ ಸಂಪರ್ಕ ದೊರೆಯಲಿದೆ. ಈ ಹಿಂದೆಅಂದಾಜು ವೆಚ್ಚಕ್ಕಿಂತ ಎರಡು ಮೂರು ಪಟ್ಟು ಹೆಚ್ಚುವರಿ ವೆಚ್ಚಕ್ಕೆ ಬೀಡ್ ದಾರರು ಬೀಡ್ ಘೋಷಿಸಿದ್ದರಿಂದ ಬಿಎಂಆರ್ ಸಿಎಲ್ ಮರು ಟೆಂಡರ್ ಕರೆ ನಿರ್ಧರಿಸಿತ್ತು.
ಇನ್ನೂ ಒಂದೂವರೆ ತಿಂಗಳ ಕಾಲ ಟೆಂಡರ್ ಕರೆಯಲು ಸಾಧ್ಯವಿಲ್ಲ. ಆದಾಗ್ಯೂ, ಇಡೀ ಯೋಜನೆಯನ್ನೆ ವಿಳಂಬಗೊಳಿಸುವುದಿಲ್ಲ. ಇನ್ನಿತರ ನಿರೀಕ್ಷಿತ ಕೆಲಸಗಳನ್ನು ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಹೇಳಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುತ್ತೇ ಅಂದುಕೊಂಡಿದ್ದೇವೆ ಆದರೆ, ಅದು ಆಗಿಲ್ಲ. ಯಾವುದೇ ಧೀರ್ಘಾವಧಿಯ ಯೋಜನೆಗಳಲ್ಲಿ ಇಂತಹವುಗಳು ನಡೆಯುತ್ತಿರುತ್ತವೆ ಎಂದು ಮತ್ತೊಬ್ಬ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆಲದಡಿ ಕಾಮಗಾರಿಯನ್ನು ನಾಲ್ಕು ಹಂತಗಳಲ್ಲಿ ಸುಮಾರು 5 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ. ಬಿಡ್ ನಲ್ಲಿ ಪಾಲ್ಗೊಂಡಿದ್ದ ನಾಲ್ಕು ಬಿಡ್ ದಾರರು ಸುಮಾರು 8000 ಸಾವಿರ ಕೋಟಿ ಬೇಕಾಗುತ್ತದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ಬಿಡ್ ಅಂತಿಮಗೊಳಿಸಿರಲಿಲ್ಲ.
ನಾಗವಾರ ಗೊಟ್ಟಿಗೆರೆ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳು ಇರಲಿದ್ದು, ಡೈರಿ ಸರ್ಕಲ್, ಮೈಕೋ ಇಂಡಸ್ಟ್ರೀಸ್, ಲ್ಯಾಂಗ್ ಪೋರ್ಡ್ ಟೌನ್, ವೆಲ್ಲಾರಾ, ಎಂ. ಜಿ. ರಸ್ತೆ. ಶಿವಾಜಿನಗರ, ಬಂಬೂ ಬಜಾರ್, ಪೊಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟಪುರ, ಅರಾಬಿಕ್ ಕಾಲೇಜ್ ಹಾಗೂ ನಾಗವಾರ ನಿಲ್ದಾಣ ಸೇರಿದಂತೆ ಒಟ್ಟು 12 ನಿಲ್ದಾಣಗಳು ನೆಲದಡಿಯಲ್ಲಿ ಬರಲಿವೆ.