ಬೆಂಗಳೂರು: ಏ.12ರಂದು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ 28 ವರ್ಷದ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಜೀವನ್ ಭೀಮಾ ನಗರ ಪೋಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಸಂತೋಷ್ ಗೌಡ, ಅಜಯ್, ಮಹೇಶ್ ಮತ್ತು ನವೀನ್ ಬಂಧಿತರಾಗಿದ್ದು ಸಂತ್ರಸ್ತೆಯ ಸಹೋದ್ಯೋಗಿ ಅರ್ಜುನ್ ನಂದಕುಮಾರ್ ಫೇಸ್ ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಸಂಬಂಧ ಪೋಲೀಸರು ಸ್ವಯಂಪ್ರೇರಿತ ದೂರು ದಾಕಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಸಂತ್ರಸ್ತ ಯುವತಿಯಾಗಲಿ, ಆಕೆಯ ಸಹೋದ್ಯೋಗಿಯಾಗಲಿ ಇದುವರೆಗೆ ಪೋಲೀಸರೆದುರು ಹೇಳಿಕೆ ದಾಖಲಿಸಲಿಲ್ಲ.
"ಟೆಕ್ಕಿಗೆ ಕಿರುಕುಳ ನೀಡುತ್ತಿದ್ದ ನಾಲ್ವರು ಪಾನಮತ್ತ ಯುವಕರನ್ನು ಪಶ್ನಿಸಿದ ಆಕೆಯ ಸಹೋದ್ಯೋಗಿಯ ಮೇಲೆ ಹಲ್ಲೆ ನಡೆದಿತ್ತು. ಇದರ ಸಂಬಂಧ ಅರ್ಜುನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಳಲು ತೋಡಿಕೊಂಡಿದ್ದರು. ಅವರ ಫೇಸ್ ಬುಕ್ ಪೋಸ್ಟ್ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೆವು.
"ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ." ಎಂದು ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ.
ಘಟನೆಯಲ್ಲಿ ಪಾಲುದಾರರಾಗಿದ್ದ ಸಂತ್ರಸ್ತೆ ಹಾಗೂ ಅರ್ಜುನ್ ಇಬ್ಬರೂ ರಜೆ ಹಾಕಿ ಊರಿಗೆ ತೆರಳಿದ್ದಾರೆ. "ಆರೋಪಿಗಳ ಬಂಧನ ವಿಚಾರವನ್ನು ಅವರಿಗೆ ತಿಳಿಸಿದ್ದೇವೆ. ಸಂತ್ರಸ್ತ ಯುವತಿ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾಳೆ. ಆಕೆ ಬಂದ ನಂತರ ಅವರ ಹೇಳಿಕೆ ದಾಖಲಿಸಿಕೊಳ್ಳಲಿದ್ದೇವೆ ಎನ್ನುವುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.