ಬೆಂಗಳೂರು: ಸಾಲ ವಸೂಲಿಗಾಗಿ 42 ಮಂದಿ ಪ್ರಯಾಣಿಕರಿದ್ದ ಬಸ್ ಹೈಜಾಕ್!

ಕೇರಳಕ್ಕೆ ಹೊರಟಿದ್ದ ಖಾಸಗಿ ಬಸ್ ವೊಂದನ್ನು 7 ಜನರ ದುಷ್ಕರ್ಮಿಗಳ ತಂಡವೊಂದು ಹೈಜಾಕ್ ಮಾಡಿದ್ದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.
ಹೈಜಾಕ್ ಆಗಿದ್ದ ಬಸ್
ಹೈಜಾಕ್ ಆಗಿದ್ದ ಬಸ್
Updated on
ಬೆಂಗಳೂರು: ಕೇರಳಕ್ಕೆ ಹೊರಟಿದ್ದ ಖಾಸಗಿ ಬಸ್ ವೊಂದನ್ನು 7 ಜನರ ದುಷ್ಕರ್ಮಿಗಳ ತಂಡವೊಂದು ಹೈಜಾಕ್ ಮಾಡಿದ್ದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಲಾಸಿ ಪಾಳ್ಯ ಬಸ್ ನಿಲ್ದಾಣದಿಂದ ಹೊರಟಿದ್ದ ಲಾಮಾ ಟ್ರಾವಲ್ಸ್ ನ KA 01 AG 636 ನಂಬರ್​ನ ಬಸ್ ಅನ್ನು ದುಷ್ಕರ್ಮಿಗಳು ಹೈಜಾಕ್ ಮಾಡಲು ಪ್ರಯತ್ನಿಸಿದ್ದು, ಪೊಲೀಸರ ತುರ್ತು ಕಾರ್ಯಾಚರಣೆಯಿಂದಾಗಿ ಅಗಬಹುದಾಗಿದ್ದ ದುರಂತ ತಪ್ಪಿದೆ.
ಪೊಲೀಸರ ಮಾಹಿತಿಯಂತೆ ಹೈಜಾಕ್ ಆಗಿದ್ದ ಬಸ್ ನಲ್ಲಿ ಸುಮಾರು 42 ಮಂದಿ ಪ್ರಯಾಣಿಕರಿದ್ದರು. ಬಸ್ ಬೆಂಗಳೂರಿನ ಕಲಾಸಿ ಪಾಳ್ಯದಿಂದ ಕೇರಳಕ್ಕೆ ಹೊರಟಿತ್ತು. ಈ ವೇಳೆ 2 ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಬಸ್ ಅನ್ನು ಹಿಂಬಾಲಿಸಿದ್ದು, ಮೈಸೂರು ಮುಖ್ಯ ರಸ್ತೆಯ ಬಳಿ ಬಸ್ ಅನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬಸ್ ನೊಳಗೆ ಬಂದ ದುಷ್ಕರ್ಮಿಗಳು ತಾವು ಪೊಲೀಸರು ಎಂದು ಹೇಳಿ, ಬಸ್ ನ ದಾಖಲಾತಿ ಕೊಡುವಂತೆ ಹೇಳಿದ್ದಾರೆ. ಈ ವೇಳೆ ಸಿಬ್ಬಂದಿ ವಿರುದ್ಧ ವಾಗ್ವಾದ ನಡೆಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಬಸ್ ಚಾಲಕನನ್ನು ಬೈಕ್ ನಲ್ಲಿ ಕೂರಿಸಿಕೊಂಡ ಓರ್ವ ದುಷ್ಕರ್ಮಿ ಅಲ್ಲಿಂದ ತೆರಳುತ್ತಾನೆ. ಮತ್ತೋರ್ವ ಬಸ್ ತಾನೇ ಚಲಾಯಿಸಿಕೊಂಡು ರಾಜ ರಾಜೇಶ್ವರಿ ನಗರದ ಪಟ್ಟಣಗೆರೆ ಬಳಿ ಇರುವ ಗೋಡೌನ್ ಗೆ ಹೋಗುತ್ತಾನೆ. ಒಟ್ಟು 7 ಮಂದಿಯ ತಂಡ ಈ ಕೃತ್ಯವೆಸಗಿದೆ ಎಂದು ಹೇಳಲಾಗಿದೆ.
ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಉದ್ದೇಶಿಸಿ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಡಿ, ಹಾಗೇನಾದರೂ ಆದರೆ ನಿಮ್ಮ ಜೀವಕ್ಕೇ ಅಪಾಯ ಎಂದು ಮತ್ತೋರ್ವ ಎಚ್ಚರಿಕೆ ನೀಡಿದ್ದಾನೆ. ದುಷ್ಕರ್ಮಿಗಳಿಂದ ಬಸ್​ ಅಪಹರಣವಾಗುತ್ತಲೇ ಪ್ರಯಾಣಿಕರು ಭಯಭೀತಗೊಂಡಿದ್ದು, ಕೆಲ ಕಾಲ ಆತಂಕದಲ್ಲೇ ಸಮಯ ದೂಡಿದ್ದಾರೆ.  ಈ ವೇಳೆ ದುಷ್ಕರ್ಮಿಗಳ ಕಣ್ಣುತಪ್ಪಿಸಿ ಓರ್ವ ಪ್ರಯಾಣಿಕ ಪೊಲೀಸರಿದೆ ವಿಷಯ ಮುಟ್ಟಿಸಿದ್ದು, ವಿಚಾರ ತಿಳಿದ ಕೂಡಲೇ ಸುಮಾರು 30 ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಬಸ್ ಅನ್ನು ಸುತ್ತುವರೆದಿದೆ.
ಪೊಲೀಸರು ಆಗಮಿಸುತ್ತಿದ್ದಂತೆಯೇ ನಾಲ್ಕು ಮಂದಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ತನಿಖೆ ನಡೆಸುತ್ತಿದ್ದಾರೆ.
ಸಾಲ ವಸೂಲಿಗಾಗಿ ನಡೆದಿತ್ತು ಹೈಡ್ರಾಮಾ
ಇನ್ನು ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು, ಲಾಮಾ ಟ್ರಾವಲ್ಸ್ ಸಂಸ್ಥೆಯ ಮಾಲೀಕ ನೌಷಾದ್, ಸುಲ್ರಾನ್ ಫೈನಾನ್ಸ್ ಕಂಪನಿಯಿಂದ  ಬಸ್ ಖರೀದಿಗಾಗಿ ಸಾಲ ಮಾಡಿದ್ದರಂತೆ. ಅದರ ತಿಂಗಳ ಕಂತನ್ನು(ಇಎಂಐ)ಸರಿಯಾಗಿ ಪಾವತಿಸಿದ ಇದ್ದುದರಿಂದ ಅವರ ಬಸ್ ಅನ್ನು ಅಪಹರಣ ಮಾಡಲಾಗಿತ್ತು ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಬಸ್ ಮಾಲೀಕನಿಗೆ ಸಾಲ ನೀಡಿದ್ದ ಫೈನಾನ್ಸ್ ಕಂಪನಿಯವರು ಪ್ರಯಾಣಿಕರಿದ್ದಾಗಲೇ ಬಸ್ ವಶಪಡಿಸಿ ಕೊಳ್ಳಲು ಮುಂದಾಗಿದ್ದು ಇಷ್ಟೆಲ್ಲಾ ರಂಪಾಟಕ್ಕೆ ಕಾರಣವಾಗಿದೆ. ಅದರಲ್ಲೂ ತಾವು ಪೊಲೀಸರು ಎಂದು ಹೇಳಿ ಪ್ರಯಾಣಿಕರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡುವಂತೆ ಮಾಡಿದ್ದಾರೆ.ಈ ಸಂಬಂಧ ಆರೋಪಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೪೧ ಮತ್ತು ೩೪೨ ರ ಅಡಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com