ಹನೂರು ಎಂಬ ಶಾಪಗ್ರಸ್ಥ ಕ್ಷೇತ್ರ: ಹನಿ ನೀರಿಗೂ ಹಾಹಾಕಾರ, ಕೆಲಸವಿಲ್ಲದೇ ಊರು ಬಿಡುತ್ತಿರುವ ಕುಟುಂಬಗಳು

ನೆರೆಯ ತಮಿಳುನಾಡಿಗೆ ಕೂಗಳತೆ ದೂರದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ಎಂಬ ಶಾಪಗ್ರಸ್ಥ ವಿಧಾನಸಭಾ ಕ್ಷೇತ್ರವೊಂದಿದೆ. ಇಲ್ಲಿ ಅಭಿವೃದ್ಧಿ ಬಿಡಿ ಹನಿ ನೀರಿಗೂ ಇಲ್ಲಿನ ಜನ ಪರದಾಡುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಾಮರಾಜನಗರ: ನೆರೆಯ ತಮಿಳುನಾಡಿಗೆ ಕೂಗಳತೆ ದೂರದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ಎಂಬ ಶಾಪಗ್ರಸ್ಥ ವಿಧಾನಸಭಾ ಕ್ಷೇತ್ರವೊಂದಿದೆ. ಇಲ್ಲಿ ಅಭಿವೃದ್ಧಿ ಬಿಡಿ ಹನಿ ನೀರಿಗೂ ಇಲ್ಲಿನ ಜನ ಪರದಾಡುತ್ತಿದ್ದಾರೆ.
ಹನೂರಿನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಕ್ಷೇತ್ರ ವೀಕ್ಷಣೆ ಮಾಡಿದ್ದು, ಈ ವೇಳೆ ಕಂಡ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಇದೇ ಜಿಲ್ಲೆಯಲ್ಲಿ ಹನೂರು ಎಂಬ ವಿಧಾನಸಭಾ ಕ್ಷೇತ್ರವೊಂದಿದ್ದು, ಇಲ್ಲಿ ಅಭಿವೃದ್ಧಿ ಬಿಡಿ ಊರಿನಲ್ಲಿ ಜನರೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಕ್ಷೇತ್ರದಲ್ಲಿ ಹುಡುಕಿದರೂ ಬೆರಳೆಣಿಕೆಯಷ್ಟು ಯುವಕರು ಮಾತ್ರ ಸಿಗುತ್ತಾರೆ. 
ಹನೂರಿನಲ್ಲಿ ಉದ್ಯೋಗದ ಕೊರತೆಯ ಗಂಭೀರ ಸಮಸ್ಯೆ ಇದ್ದು, ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿ ಊರಿನ ಬಹುತೇಕ ಕುಟುಬಂಗಳು ಊರು ತೊರೆದೆ ಬೇರೆ ಬೇರೆ ಊರುಗಳಲ್ಲಿ ಕೆಲ ಅರಸಿ ಹೋಗಿದ್ದಾರೆ. ಕ್ಷೇತ್ರದಲ್ಲಿರುವ ಅರಳಿಕಟ್ಟಿಯಲ್ಲಿ ಕೂತು ಹರಟೆ ಹೊಡೆಯುವ ಹಿರಿಯರು, ದಾರಿಯಲ್ಲಿ ಆಟವಾಡಿಕೊಂಡಿರುವ ಮಕ್ಕಳು ಇಲ್ಲಿ ಸಾಮಾನ್ಯ. ಈ ಊರಿನ ಬಹುತೇಕ ಮನೆಗಳಿಗೆ ಬೀಗ ಜಡಿಯಲಾಗಿರುತ್ತದೆ. ಕಾರಣ ಇಲ್ಲಿನ ಕುಟುಂಬಸ್ಥರು ಕೆಲಸಕ್ಕಾಗಿ ಬೇರೆ ಬೇರೆ ಊರಿಗೆ ತೆರಳಿರುತ್ತಾರೆ. 
ಹನೂರಿನ ಕುರುತ್ತಿ ಹೊಸೂರು ಗ್ರಾಮದಲ್ಲಿ 3, 380 ಮತದಾರರಿದ್ದು, ಈ ಪೈಕಿ ಅರ್ಧದಷ್ಟೂ ಜನರೂ ಕೂಡ ಗ್ರಾಮದಲ್ಲಿಲ್ಲ. ಕಾರಣ ಕೆಲಸವಿಲ್ಲ, ಹೀಗಾಗಿ ಗ್ರಾಮ ತೊರೆದಿರುವ ಮಂದಿ ವಿವಿಧೆಡ ಉದ್ಯೋಗವನ್ನರಸಿ ಹೋಗಿದ್ದಾರೆ. ಊರಿನ ನಡುವೆ ಇರುವ ಅಂಗಡಿಯ ಬಳಿ ಒಂದಷ್ಟು ಮಂದಿ ಕೂತಿರುವುದು ಬಿಟ್ಟರೇ ಇಡೀ ಗ್ರಾಮದಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಾಣ ಸಿಗುತ್ತಾರೆ. ಕೇವಲ ಈ ಗ್ರಾಮದಷ್ಟೇ ಅಲ್ಲ, ಅಕ್ಕಪಕ್ಕದ ಕುರಟ್ಟೊ ಹೊಸೂರು, ಕೌಡಲ್ಲಿ, ಚೆಂಗ್ಡಿ, ದಂಟಾಲಿ, ಡಿನ್ನಲ್ಲಿ, ರಾಮಪುರ, ಗಜನೂರು, ಕೊಪ್ಪ, ಮಿನ್ನ್ಯ, ಕೆ ಎಸ್ ದೋಡ್ಡಿ ಮತ್ತು ನಕುಂಡಿ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ. ಉದ್ಯೋಗವನ್ನು ಅರಸಿ ಯುವಕರು ಬೇರೆ ಬೇರೆ ಊರಿಗೆ ಗುಳೆ ಹೋಗಿದ್ದಾರೆ. ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು, ಸತ್ಯಮಂಗಲ ಮತ್ತು ತಿರುಪುರ್ ಜಿಲ್ಲೆಗಳಿಗೆ ಉದ್ಯೋಗವನ್ನರಸಿ ಹೋಗಿದ್ದಾರೆ ಎಂದು ಗ್ರಾಮದ ಹಿರಿಯ ವ್ಯಕ್ತಿಯಬ್ಬರು ತಿಳಿಸಿದ್ದಾರೆ.
ಇಲ್ಲಿನ ರೈತರು ತಮ್ಮ ಬೆಳೆಗಳಿಗಾಗಿ ಮಳೆಯನ್ನೇ ನೆಚ್ಚಿಕೊಂಡಿದ್ದಾರೆ. ಮಳೆಯನ್ನು ಹೊರತು ಪಡಿಸಿದರೆ ಇಲ್ಲಿ ಬೇರಾವುದೇ ಪರ್ಯಾಯ ಮಾರ್ಗಗಳಿಲ್ಲ.  ಅಂತರ್ಜಲ ಕುಸಿದಿದ್ದು, ಬೋರ್ ವೆಲ್ ಗಳು ಕಾರ್ಯ ಸ್ಥಗಿತಗೊಳಿಸಿವೆ.  ಕ್ಷೇತ್ರದಲ್ಲಿ ಸರಿಯಾದ ರಸ್ತೆಗಳಿಲ್ಲ, ಶುದ್ಧ ಕುಡಿಯುವ ನೀರು ಇಲ್ಲಿ ಕನಸಾಗಿದ್ದು, ಆರೋಗ್ಯ ಕೇಂದ್ರಗಳು ಇವೆಯಾದರೂ ಬೀಗಜಡಿದು ಕಾರ್ಯ ಸ್ಥಗಿತಗೊಳಿಸಿವೆ. ಶಿಕ್ಷಣ ಸೌಲಭ್ಯ ಕೂಡ ಇಲ್ಲ. ಇಲ್ಲಿನ ಚೆಂಗಡಿ ಎಂಬ ಗ್ರಾಮದಲ್ಲಿ ಸುಮಾರು 450 ಜನ ವಾಸಿಸುತ್ತಿದ್ದು, ಅರಣ್ಯ ದಿಂದ ಸುತ್ತುವರೆದಿರುವ ಈ ಗ್ರಾಮ ಇಲ್ಲಿ ಜನವಸತಿಯೇ ಇಲ್ಲ ಎಂಬ ರೀತಿಯಲ್ಲಿ ಇಲ್ಲಿನ ಜನ ನಗರದಿಂದ ದೂರದಲ್ಲಿ ಬದುಕುತ್ತಿದ್ದಾರೆ.  ಗ್ರಾಮವಿದ್ದರೂ ಇಲ್ಲಿ ರಸ್ತೆಗಳೇ ಇಲ್ಲ, ಇಲ್ಲಿನ ಕೆಲ ಮನೆಗಳಲ್ಲಿ ಬೈಕ್ ಗಳಿದ್ದು ಇದೇ ಇಲ್ಲಿನ ಸಾರಿಗೆ ಸಂಪರ್ಕ ವ್ಯವಸ್ಥೆಯಾಗಿದೆ.
ಸುಮಾರು 15 ಕಿ.ಮೀ ದೂರದಲ್ಲಿರುವ ಚೆಂಗಡಿ ಗ್ರಾಮದಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗರ್ಣಿಣಿಯೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು. ಆಗ ಇಡೀ ಗ್ರಾಮ ಚುನಾವಣೆನ್ನು ಬಹಿಷ್ಕರಿಸುವ  ಬೆದರಿಕೆ ಹಾಕಿತ್ತು. ಇದೀಗ ಮತ್ತೆ ಅದೇ ಗ್ರಾಮದ ನಿವಾಸಿಗಳು ಚುನಾವಣೆ ಬಹಿಷ್ಕರಿಸುವ ಮಾತನಾಡುತ್ತಿದ್ದಾರೆ. 
ಕೃಷಿ ಭಾಗ್ಯ, ಹಾಗೆಂದರೇನು?
ಇನ್ನು ಇಲ್ಲಿ ಸರ್ಕಾರದ ಯೋಜನೆಗಳು ಯಾವ ಮಟ್ಟಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದರೆ ಆ ಯೋಜನೆಗಳ ಹೆಸರೂ ಕೂಡ ಇಲ್ಲಿನ ಜನರಿಗೆ ತಿಳಿದಿಲ್ಲ. ಇನ್ನು ಯೋಜನೆಯ ಫಲ ಜನರು ಪಡೆಯುವುದು ಹೇಗೆ. ನಮ್ಮ ಪ್ರತಿನಿಧಿ ಇಲ್ಲಿ ನಿವಾಸಿಗಳನ್ನು ಮಾತನಾಡಿಸಿ ಸರ್ಕಾರದ ಯೋಜನೆಗಳ ಕುರಿತು ಪ್ರಶ್ನಿಸಿದಾಗ ಆ ಯೋಜನೆಗಳ ಕುರಿತು ಕನಿಷ್ಠ ಜ್ಞಾನ ಕೂಡ ಇವರಿಗಿಲ್ಲ. ಇದು ಇಲ್ಲಿನ ಜನ ಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಅರೆ ಗ್ರಾಮಸ್ಥರನ್ನು ಬಿಡಿ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರಿಗೂ ಕೃಷಿ ಭಾಗ್ಯ ಯೋಜನೆಯ ಹೆಸರೇ ತಿಳಿದಿಲ್ಲ. ಇನ್ನು ಯೋಜನೆ ಫಲವನ್ನು ಇವರು ಹೇಗೆ ಫಲಾನುಭವಿಗಳಿಗೆ ನೀಡುತ್ತಾರೆ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com