ಬೆಂಗಳೂರು: ಮಡಿವಾಳ ಬಾಲ ಮಂದಿರದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ- 13 ಬಾಲಾಪರಾಧಿಗಳು ಪರಾರಿ

ಕೆಲ ದಿನಗಳ ಹಿಂದಷ್ಟೇ ಮಡಿವಾಳದ ಬಾಲಮಂದಿರದಿಂದ ತಪ್ಪಿಸಿಕೊಂಡು ಪೊಲೀಸರ ಬಲೆಗೆ ಬಿದ್ದಿದ್ದ 9 ಮಕ್ಕಳು, ಮಂಗಳವಾರ ಮುಂಜಾನೆ ಗೃಹ ರಕ್ಷದ ದಳದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮತ್ತೆ ನಾಲ್ವರು ಬಾಲಕರೊಂದಿಗೆ ಮಂದಿರದಿಂದ ಪರಾರಿಯಾಗಿರುವ ಘಟನೆ ನಡೆದಿದೆ...
ಮಡಿವಾಳ ಬಾಲ ಮಂದಿರ
ಮಡಿವಾಳ ಬಾಲ ಮಂದಿರ
ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಮಡಿವಾಳದ ಬಾಲಮಂದಿರದಿಂದ ತಪ್ಪಿಸಿಕೊಂಡು ಪೊಲೀಸರ ಬಲೆಗೆ ಬಿದ್ದಿದ್ದ 9 ಮಕ್ಕಳು, ಮಂಗಳವಾರ ಮುಂಜಾನೆ ಗೃಹ ರಕ್ಷದ ದಳದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮತ್ತೆ ನಾಲ್ವರು ಬಾಲಕರೊಂದಿಗೆ ಮಂದಿರದಿಂದ ಪರಾರಿಯಾಗಿರುವ ಘಟನೆ ನಡೆದಿದೆ. 
ತಪ್ಪಿಸಿಕೊಂಡಿರುವ ಬಾಲಕರು 16ರಿಂದ 18 ವರ್ಷದವರಾಗಿದ್ದು, ಬಾಲ ಮಂದಿರದಲ್ಲಿ ರಾತ್ರಿ ಕಾವಲಿನಲ್ಲಿದ್ದ ಗೃಹ ರಕ್ಷಕನ ಮೇಲೆ ಹಲ್ಲೆ ನಡೆಸಿದ ಬಾಲಕರು, ಕಂಬಿ ಕಿತ್ತಿ ಪರಾರಿಯಾಗಿದ್ದಾರೆ. 
ಪರಾರಿಯಾಗಿರುವ ಮಕ್ಕಳ ಪತ್ತೆಗೆ  ಮಡಿವಾಳ ಪೊಲೀಸರು ಹಾಗೂ ಬಾಲಮಂದಿರದ ಅಧಿಕಾರಿಗಳು ವಿಶೇಷ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 
ಪ್ರಸ್ತುತ ಪರಾರಿಯಾಗಿರುವ ಮಕ್ಕಳ ಪೈಕಿ ಒಬ್ಬಾತನ ಮೇಲೆ ಕೊಲೆ ಪ್ರಕರಣವಿದ್ದು, ಇನ್ನುಳಿದವರ ವಿರುದ್ಧ ಕಳ್ಳತನ ಪ್ರಕ್ರಣಗಳು ದಾಖಲಾಗಿದ್ದವು. 
ಮಕ್ಕಳು ಕೊಠಡಿಯೊಂದರಲ್ಲಿ ತಡರಾತ್ರಿಯವರೆಗೂ ಕೇರಂ ಬೋರ್ಡ್ ಆಡುತ್ತಿದ್ದರು. ನಂತರ ಸಿಬ್ಬಂದಿಗಳ ಗಮನವನ್ನು ಬೇರೆಡೆಗೆ ಹರಿಸಲು ಉದ್ದೇಶಪೂರ್ವಕವಾಗಿ ಜಗಳವಾಡಿದ್ದಾರೆ. ಜಗಳವಾಡುತ್ತಿದ್ದ ಶಬ್ಧವನ್ನು ಕೇಳಿದ ಭದ್ರತಾ ಸಿಬ್ಬಂದಿ ರಮೇಶ್ ಬಾಬು ಅವರು ಕೊಠಡಿಯ ಬೀಗವನ್ನು ತೆಗೆದಿದ್ದಾರೆ. ಕೂಡಲೇ ಮಕ್ಕಳು ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿದ್ದಾರೆ. 
ಬಾಬು ಅವರು ಕೂಗಾಡುತ್ತಿರುವುದನ್ನು ಕೇಳಿದ ಮತ್ತೊಬ್ಬ ಸಿಬ್ಬಂದಿ ಸುರೇಶ್ ಕೆ.ಆರ್. ಎಂಬುವವರು ಏನಾಗುತ್ತಿದೆ ಎಂಬುದನ್ನು ತಿಳಿಯಲು ಒಳಗೆ ಬಂದಿದ್ದಾರೆ. ಬಳಿಕ ಸುರೇಶ್ ಅವರ ಮೇಲೆ ದಾಳಿ ಮಾಡಿದ ಮಕ್ಕಳು ಕಟ್ಟಡ ಬೀಗಗಳನ್ನು ಕಿತ್ತುಕೊಂಡು ಮುಖ್ಯದ್ವಾರದಿಂದಲೇ ಪರಾರಿಯಾಗಿದ್ದಾರೆ. 
ಹಲ್ಲೆಯಿಂದ ಸಾವಾರಿಸಿಕೊಂಡ ಸಿಬ್ಬಂದಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೊಯ್ಸಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಯಾರೊಬ್ಬರು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. 
ನಂತರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕೋರಮಂಗಲದಲ್ಲಿ ಓರ್ವ ಬಾಲಕ ಪತ್ತೆಯಾಗಿದ್ದು, ಬಾಲಕನ್ನು ಬಾಲಮಂದಿರದ ವಶಕ್ಕೆ ನೀಡಲಾಗಿದೆ. 
ಬಾಲಮಂದಿರದ ಶೌಚಾಲಯದ ಸರಳು ಮುರಿದು ಜುಲೈ.23ರಂದು ಪರಾರಿಯಾಗಿದ್ದ 9 ಬಾಲಕರನ್ನು ಮಡಿವಾಳ ಠಾಣೆ ಪೊಲೀಸರು ಮೂರೇ ದಿನಗಳಲ್ಲಿ ಪತ್ತೆ ಹಚ್ಚಿ ಬಾಲ ಮಂದಿರದ ವಶಕ್ಕೊಪ್ಪಿಸಿದ್ದರು. ಆಗಲೇ ಮಂದರಿದ ಭದ್ರತೆ ಬಗ್ಗೆ ಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಪೊಲೀಸರು ಸೂಚಿಸಿದ್ದರು. 
ಬಳಿಕ ಆ 9 ಮಕ್ಕಳೇ, ಮತ್ತೆ ನಾಲ್ವರು ಮಕ್ಕಳನ್ನು ಸೇರಿಸಿಕೊಂಡು ಈ ಕೃತ್ಯವೆಸಗಿದ್ದಾರೆಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com