ಕಿಕಿ ಚಾಲೆಂಜ್ ಸ್ವೀಕರಿಸದಂತೆ ಸರ್ಕಾರ, ಪೊಲೀಸರಿಂದ ಜನರಿಗೆ ಮನವಿ
ಬೆಂಗಳೂರು: ಅಪಾಯಕಾರಿ ಕಿಕಿ ಚಾಲೆಂಜ್ ನ ಪರಿಣಾಮವನ್ನು ಅರಿತ ಸರ್ಕಾರ ಯುವಜನತೆಗೆ ಈ ಅಪಾಯಕಾರಿ ಚಾಲೆಂಜ್ ನ್ನು ಸ್ವೀಕರಿಸಿ ಜೀವಕ್ಕೆ ಕುತ್ತು ತಂದುಕೊಳ್ಳದಂತೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ನಾವು ಸಾಮಾಜಿಕ ಮಾಧ್ಯಮ ಬಳಸುವುದಕ್ಕೆ ವಿರೋಧಿಸುವುದಿಲ್ಲ. ಅದು ಸಾರ್ವಜನಿಕರಿಗೆ ಉಪದ್ರ ಉಂಟುಮಾಡುವಂತೆ ಮತ್ತು ಜನರ ಜೀವಕ್ಕೆ ಅಪಾಯವುಂಟುಮಾಡುವ ಗೀಳಾಗಿ ಕಾಡಬಾರದು. ಸಾರ್ವಜನಿಕ ರಸ್ತೆಯಲ್ಲಿ ಈ ಸವಾಲನ್ನು ಸ್ವೀಕರಿಸಬೇಡಿ. ಇದು ನಿಮಗೆ ಮತ್ತು ಬೇರೆಯವರಿಗೆ ತೊಂದರೆಯನ್ನುಂಟುಮಾಡಬಹುದು. ಪೋಷಕರು ತಮ್ಮ ಮಕ್ಕಳಿಗೆ ಈ ಅಪಾಯಕಾರಿ ಆಟದ ಬಗ್ಗೆ ಅರಿವು ಮೂಡಿಸಬೇಕು ಮತ್ತು ನಿಗಾ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಗೀಳು ಆಗಿ ಪರಿಣಮಿಸಿ ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು ಅಂತಾ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಅಪಾಯಕಾರಿ ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಿಕಿ ಚಾಲೆಂಜ್ ನಿಮ್ಮ ದೇಹಕ್ಕೆ ಮತ್ತು ಗಾಡಿಗೆ ಅಪಾಯಕಾರಿ ಎಂದು ಜಾಗೃತಿ ನಡೆಸಿದರು. ಜೊತೆಗೆ ಕಿಕಿ ಚಾಲೆಂಜ್ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಅಪ್ ಲೋಡ್ ಮಾಡಿ ಆಡುಗೋಡಿ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ