ಬೆಂಗಳೂರು: ಕಾರಿನಲ್ಲಿ ಲಿಪ್ಟ್ ಕೊಡುವ ನೆಪದಲ್ಲಿ ದರೋಡೆ ನಡೆಸುತ್ತಿದ್ದ ಆರು ಮಂದಿ ದರೋಡೆಕೋರರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಹೊಸೂರು ನಿವಾಸಿಗಳಾದ ನಾಗ ಆಲಿಯಾಸ್ ನಾಗೇಂದ್ರ (22) ವೆಂಕಟೇಶ್ (20) ವಿಜಯ್ ಕುಮಾರ್ (31) ಹಾಗೂ ಅನೇಕಲ್ ನಿವಾಸಿ ಬಸವರಾಜ್ ( 26 ) ಬಂಧಿತ ಆರೋಪಿಗಳು.ಬಂಧಿತರಿಂದ ಎರಡು ಕಾರುಗಳು ಹಾಗೂ 84 ಗ್ರಾಂ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಲಕ್ಟ್ರಾನಿಕ್ ಸಿಟಿಯಲ್ಲಿ ಜುಲೈ 27 ರಂದು ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸೂರಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಸಾಪ್ಟ್ ವೇರ್ ಎಂಜಿನಿಯರ್ ಆರ್ ಕಾರ್ತಿಕ್ ಎಂಬವರನ್ನು ಕಾರಿನಲ್ಲಿ ಲಿಪ್ಟ್ ಕೊಡುವುದಾಗಿ ಹತ್ತಿಸಿಕೊಂಡ ಈ ತಂಡ ಸ್ವಲ್ಪ ದೂರದ ಸಾಗಿದ ನಂತರ ಚಾಕುವಿನಿಂದ ಬೆದರಿಸಿ ಮೊಬೈಲ್ ಪೋನ್, ಚಿನ್ನದ ಸರ ಹಾಗೂ ಎರಡು ಉಂಗುರ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಆರ್ . ಕಾರ್ತಿಕ್ ಪೊಲೀಸರಿಗೆ ದೂರು ನೀಡಿದ್ದರು.
ಕಾರ್ತಿಕ್ ಅವರಿಂದ ಡೆಬಿಟ್ ಕಾರ್ಡ್ ದೋಚಿ ಬಳಗಾರನಹಳ್ಳಿ ಫೆಡರಲ್ ಬ್ಯಾಂಕಿನ ಎಟಿಎಂನಿಂದ 15 ಸಾವಿರ ರೂ. ತೆಗೆದುಕೊಂಡಿದ್ದರು. ಒಂದು ವೇಳೆ ಪೊಲೀಸರಿಗೆ ದೂರು ನೀಡಿದ್ದರೆ ಶೂಟ್ ಮಾಡುವುದಾಗಿ ದರೋಡೆಕೋರರು ಬೆದರಿಕೆ ಹಾಕಿದ್ದರು. ದೂರು ದಾಖಲಾದ ನಂತರ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದರು. ಇವರು ಇತರ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದರು.
ಹೆಬ್ಬಗೋಡಿ, ಸರ್ಜಾಪುರ, ಸುದ್ದುಗುಂಟೆ ಪಾಳ್ಯ, ಮಹದೇವಪುರ ಮತ್ತು ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement