ಕಲಬುರಗಿ: ಜಿಲ್ಲೆಯ ಅಳಂದ ತಾಲ್ಲೂಕಿನ ಹಿತ್ತಲಶಿರೂರು ಗ್ರಾಮದಲ್ಲಿ ಅವ್ಯಾಹತ ಮಳೆಯಿಂದ ಮನೆಯೊಂದು ಕುಸಿದು ಬಿದ್ದು ಮಹಿಳೆ ಹಾಗೂ ಅವರ ಇಬ್ಬರು ಪುತ್ರಿಯರು ಸ್ಥಳದಲ್ಲಿಯೇ ಅಸುನೀಗಿದ್ದು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಲಕ್ಷ್ಮೀಬಾಯಿ ಒಡೆಯರ್(35 ವರ್ಷ) ಮತ್ತು ಅವರ ಇಬ್ಬರು ಮಕ್ಕಳಾದ ಅಂಬಿಕಾ (11 ವರ್ಷ), ಶಿವಮ್ಮ (9 ವರ್ಷ) ಎಂದು ಗುರುತಿಸಲಾಗಿದೆ. ಮನೆ ಮಾಲಿಕ ಪ್ರಭು ಒಡೆಯರ್ ಗಾಯಗೊಂಡಿದ್ದು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊನ್ನೆ ಬುಧವಾರ ರಾತ್ರಿಯಿಂದ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ಪ್ರಭು ಒಡೆಯರ್ ಅವರ ಮನೆಯ ಗೋಡೆ ಕುಸಿಯಿತು. ಈ ಸಂದರ್ಭದಲ್ಲಿ ಎಲ್ಲರೂ ನಿದ್ದೆ ಮಾಡುತ್ತಿದ್ದರು. ಆ ದಿನ ರಾತ್ರಿ ಗ್ರಾಮದಲ್ಲಿ 64.5 ಮಿಲಿ ಮೀಟರ್ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement