ಬೆಂಗಳೂರು: ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಟೀಕಿಸಿದ್ದಾರೆ. ದೇಶದ ಆರ್ಥಿಕತೆ ಮತ್ತು ಆರ್ಥಿಕ ದರದ ಬಗ್ಗೆ ಕಠು ವಾಸ್ತವವನ್ನು ಮರೆಮಾಚಲು ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕತೆ ಏನಾಗುತ್ತಿದೆ ಎಂಬ ಬಗ್ಗೆ ಜನತೆಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 92ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.
ಅಂಕಿಅಂಶಗಳನ್ನು ರಾಜಕೀಯಕರಣಗೊಳಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಭಾರತದ ಅಂಕಿಅಂಶಗಳ ಆಯೋಗ ದೇಶದ ಸರಾಸರಿ ಜಿಡಿಪಿಯನ್ನು ಯಾವ ರೀತಿ ಲೆಕ್ಕಹಾಕಬೇಕು ಎಂದು ಮಾಡಿರುವ ಶಿಫಾರಸ್ಸನ್ನು ಕೂಡಲೇ ಅಳಿಸಿಹಾಕಲಾಯಿತು. ಈ ಹಿಂದೆ ಕಾರ್ಮಿಕ ಸಚಿವಾಲಯ ಹೊಸ ಉದ್ಯೋಗ ಸೃಷ್ಟಿ ಬಗ್ಗೆ ಅಂದಾಜು ಮಾಡಿತ್ತು. ಇದೀಗ ನೌಕರರ ಭವಿಷ್ಯ ನಿಧಿ ಸಂಘಟನೆಯ ಅಂಕಿಅಂಶವನ್ನು ಹೆಚ್ಚು ಉಲ್ಲೇಖಿಸಲಾಗುತ್ತಿದೆ. ಅಂಕಿಅಂಶಗಳನ್ನೇ ರಾಜಕೀಯಗೊಳಿಸಿದರೆ ನಾವು ಯಾರನ್ನು ನಂಬಬೇಕು ಎಂದು ಕೇಳುತ್ತಾರೆ.
ನೋಟುಗಳ ಅನಾಣ್ಯೀಕರಣ ಒಬ್ಬ ರಾಜ ತೆಗೆದುಕೊಂಡ ನಿರ್ಧಾರ, ನೋಟುಗಳ ಚಲಾವಣೆ ನಿಷೇಧ ಮತ್ತು ಜಿಎಸ್ಟಿ ಆತುರವಾಗಿ ತೆಗೆದುಕೊಂಡ ನಿರ್ಧಾರ ದೇಶದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ಎಂದು ಟೀಕಿಸಿದರು.
Advertisement