ರಾಜ್ಯ
ಬೆಂಗಳೂರಿನ ಐಐಎಸ್ ಸಿಯಲ್ಲಿ ಸಿಲಿಂಡರ್ ಸ್ಫೋಟ: ಗಾಯಾಳುಗಳ ಸ್ಥಿತಿ ಗಂಭೀರ
ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಯ ಪ್ರಯೋಗಾಲದಲ್ಲಿ ಬುಧವಾರ ಸಿಲಿಂಡರ್ ಸ್ಫೋಟಗೊಂಡು ಯುವ ವಿಜ್ಞಾನಿಯೊಬ್ಬರು ಮೃತಪಟ್ಟಿದ್ದರು.
ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಯ ಪ್ರಯೋಗಾಲದಲ್ಲಿ ಬುಧವಾರ ಸಿಲಿಂಡರ್ ಸ್ಫೋಟಗೊಂಡು ಯುವ ವಿಜ್ಞಾನಿಯೊಬ್ಬರು ಮೃತಪಟ್ಟಿದ್ದರು. ಅಲ್ಲದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಇಂಜಿನಿಯರ್ ಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಗುರುವಾರ ವೈದ್ಯರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ತಿಕ್(25), ನರೇಶ್ ಕುಮಾರ್(33) ಹಾಗೂ ಅತುಲ್ಯಾ ಉದಯ್ ಕುಮಾರ್(24) ಅವರು ಸೂಪರ್ ವೇವ್ ಟೆಕ್ನೋಲೊಜಿ ಲಿಮಿಟೆಡ್ ನ ಉದ್ಯೋಗಿಗಳಾಗಿದ್ದು, ಇಬ್ಬರು ಪ್ರಾಧ್ಯಾಪಕರ ನೇತೃತ್ವದಲ್ಲಿ ಸ್ಟಾರ್ಟ್ ಅಪ್ ಗಾಗಿ ಕೆಲಸ ಮಾಡುತ್ತಿದ್ದರು.
ಈ ಮೂವರು ಗಾಯಾಳುಗಳು ಎಂಎಸ್ ರಾಮಯ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೈಡ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಏರೋಸ್ಪೇಸ್ ವಿಭಾಗದ 32 ವರ್ಷದ ಸಂಶೋಧನಾ ವಿದ್ಯಾರ್ಥಿ ಮನೋಜ್ ಕುಮಾರ್ ಅವರು ನಿನ್ನೆ ಸ್ಥಳದಲ್ಲೇ ಮೃತಪಟ್ಟಿದ್ದರು.