ಬೆಂಗಳೂರು: ಗುರಾಯಿಸಿದ್ದಕ್ಕೆ ಚಾಕುವಿನಿಂದ ಇರಿದು ಯುವಕನ ಹತ್ಯೆ

ಬಾರ್ ನಲ್ಲಿ ಮದ್ಯ ಸೇವಿಸುವ ವೇಳೆ ಗುರಾಯಿಸಿದ ಎಂಬ ಕಾರಣಕ್ಕೆ ಕಿಡಿಗೇಡಿಗಳು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮಲ್ಲತ್ತಹಳ್ಳಿ ಸಮೀಪದ ಮುದ್ದಿನಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬಾರ್ ನಲ್ಲಿ ಮದ್ಯ ಸೇವಿಸುವ ವೇಳೆ ಗುರಾಯಿಸಿದ ಎಂಬ ಕಾರಣಕ್ಕೆ ಕಿಡಿಗೇಡಿಗಳು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮಲ್ಲತ್ತಹಳ್ಳಿ ಸಮೀಪದ ಮುದ್ದಿನಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 
ಮಲ್ಲತ್ತಹಳ್ಳಿ ನಿವಾಸಿಯಾಗಿರುವ ಅರುಣ್ ಕೃಷ್ಣಾ (28) ಹತ್ಯೆಯಾದ ದುರ್ದೈವಿ. ಘಟನೆ ವೇಳೆ ಮೃತನ ಸ್ನೇಹಿತ ಧಿಲಾನ್ ಸೋಮಯ್ಯ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಮಾರುತಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 
ಶುಕ್ರವಾರ ರಾತ್ರಿ ಮುದ್ದಿನ ಪಾಳ್ಯದ ಮಾರುತಿ ಬಾರ್'ಗೆ ಅರುಣ್ ಹಾಗೂ ಆತನ ಸ್ನೇಹಿತ ಸೋಮಯ್ಯ ಹೋಗಿದ್ದರು. ಇದೇ ವೇಳೆ ಅವರ ಪಕ್ಕ ಮತ್ತೊಂದು ಟೇಬಲ್ ನಲ್ಲಿದ್ದ ಮೂವರು ಯುವಕರು, ಕುಡಿದ ಅಮಲಿನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ಈ ವರ್ತನೆಗೆ ಅರುಣ್ ತೀವ್ರ ಅಸಮಾಧಾನಗೊಂಡು ಆ ಗುಂಪಿನಲ್ಲಿದ್ದ ಒಬ್ಬನನ್ನು ದುರುಗುಟ್ಟಿ ನೋಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. 
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಬಾರ್ ನೌಕರರನ್ನು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಮದ್ಯ ಸೇವಿಸಿ ಬಾರ್ ನಿಂದ ಹೊರ ನಡೆದ ಬಳಿಕ 11.30ರ ಸುಮಾರಿಗೆ ಮತ್ತೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ಅರುಣ್ ಎದೆಗೆ ಚಾಕುವಿನಿಂದ ಇರಿದ ಆರೋಪಿಗಳು ಸೋಮಯ್ಯ ಅವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. 
ಕೂಡಲೇ ಹಲ್ಲೆಗೊಳಗಾದವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅತೀವ್ರ ರಕ್ತಸ್ರಾವವಾಗಿದ್ದರಿಂದಾಗಿ ಅರುಣ್ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಹಂತಕರ ಚಲನವಲನಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com