ಬೆಂಗಳೂರು: ಮೈಮೇಲೆ ತುರಿಕೆ ಪುಡಿ ಎರಚಿ 45,000 ನಗದು ದರೋಡೆ
ರಾಜ್ಯ
ಬೆಂಗಳೂರು: ಮೈಮೇಲೆ ತುರಿಕೆ ಪುಡಿ ಎರಚಿ 45,000 ನಗದು ದರೋಡೆ
ತುರಿಕೆ ಪುಡಿ ಮೈಮೇಲೆ ಎರಚಿ ವ್ಯಕ್ತಿಯೊಬ್ಬರಿಂದ 45,000 ರೂ ದೋಚಿದ ಘಟನೆ ಬೆಂಗಳೂರು ಕೆಆರ್ ಮಾರ್ಕೆಟ್ ಬಳಿ ನಡೆದಿದೆ.
ಬೆಂಗಳೂರು: ತುರಿಕೆ ಪುಡಿ ಮೈಮೇಲೆ ಎರಚಿ ವ್ಯಕ್ತಿಯೊಬ್ಬರಿಂದ 45,000 ರೂ ದೋಚಿದ ಘಟನೆ ಬೆಂಗಳೂರು ಕೆಆರ್ ಮಾರ್ಕೆಟ್ ಬಳಿ ನಡೆದಿದೆ. ಶನಿವಾರ ನಡೆದ ಘಟನೆ ಸಂಬಂಧ ಜೆಪಿ ನಗರ ನಿವಾಸಿ ವಿನೀತ್ ಪವನ್ ಜೈನ್ ಎನ್ನುವವರು ಸೋಮವಾರದಂದು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿನೀತ್ ಅವರು ಚಿಕ್ಕಪೇಟೆಯಲ್ಲಿ ಹಾರ್ಡ್ ವೇರ್ ಶಾಪ್ ನಡೆಸುತ್ತಿದ್ದಾರೆ.
ಶನಿವಾರ ರಾತ್ರಿ 8.30ರ ಸುಮಾರಿಗೆ ಅಂಗಡಿ ಬಾಗಿಲು ಹಾಕಿ ತಮ್ಮ ಸ್ಕೂಟರ್ ನಲ್ಲಿ ಮನೆ ಕಡೆ ಹೊರಟಿದ್ದ ಜೈನ್ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಇವರ ತೋಳಿನ ಭಾಗಕ್ಕೆ ತುರಿಕೆ ಪುಡಿಯನ್ನು ಎರಚಿದ್ದಾನೆ. ತುರಿಕೆ ಪ್ರಾರಂಭವಾಗಿದ್ದ ಕಾರಣ ತಮ್ಮ ವಾಹನ ನಿಲ್ಲಿಸಿದ್ದ ವಿನೀತ್ ಪುಡಿ ಎರಚಿದ್ದ ಜಾಗವನ್ನು ನೀರಿನಿಂದ ತೊಳೆದುಕೊಳ್ಳಲಿಕ್ಕಾಗಿ ಹತ್ತಿರದ ಆಟೋ ರಿಕ್ಷಾ ಚಾಲಕರ ಬಳಿ ನೀರು ತರಲೆಂದು ಹೋಗಿದ್ದಾರೆ. ಇದೇ ವೇಳೆ ಇನ್ನೋರ್ವ ದುಷ್ಕರ್ಮಿಯು ಸ್ಕೂಟರ್ ನ ಬೂಟ್ ಬಾಕ್ಸ್ ನಲ್ಲಿದ್ದ ನಗದು, ಪೆನ್ ಡ್ರೈವ್ ಹಾಗೂ ಅಂಗಡಿಯ ಕೀಲಿ ಕೈಯೊಡನೆ ಪರಾರಿಯಾಗಿದ್ದಾನೆ ಎಂದು ಪೋಲೀಸ್ ಅಧಿಕಾರಿಯೊಬ್ಬರು ಹೇಳಿಅದರು.

