ಮಾಧ್ಯಮಗಳು ನನ್ನ ವೃತ್ತಿಜೀವನವನ್ನು ನಾಶಮಾಡಲು ಯತ್ನಿಸುತ್ತಿವೆ: ಶಾಸಕ ಹ್ಯಾರಿಸ್

ಯುವಕನೊಬ್ಬನ ಮೇಲೆ ತಮ್ಮ ಪುತ್ರ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಮಾಧ್ಯಮಗಳ ವಿರುದ್ಧ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರು ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ...
ಕಾಂಗ್ರೆಸ್ ಶಾಸಕ ಹ್ಯಾರಿಸ್
ಕಾಂಗ್ರೆಸ್ ಶಾಸಕ ಹ್ಯಾರಿಸ್
ಬೆಂಗಳೂರು: ಯುವಕನೊಬ್ಬನ ಮೇಲೆ ತಮ್ಮ ಪುತ್ರ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಮಾಧ್ಯಮಗಳ ವಿರುದ್ಧ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರು ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಮೊಹಮ್ಮದ್ ನಲಪಾಡ್ ಶರಣಾಗುವುದಕ್ಕಿಂತ ಮೊದಲು ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವ ಸಲುವಾಗಿ ಆತನ ತಂದೆಯೂ ಆಗಿರುವ ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್ ಅವರ ಮನಗೆ ತೆರಳಿ ಶೋಧ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ಶಾಸಕ ಹ್ಯಾರಿಸ್, ಪುತ್ರ ಮನೆಯಲ್ಲಿ ಇಲ್ಲ, ಇನ್ನು ಕೆಲವೇ ಗಂಟೆಗಳಲ್ಲಿ ಶರಣಾಗುತ್ತಾನೆಂದು ಪೊಲೀಸರಿಗೆ ಹೇಳಿದ್ದರು. ಬಳಿಕ ಶಾಸಕರ ಮಾತು ಕೇಳಿ ಪೊಲೀಸರು ಅಲ್ಲಿಂದ ಹೊರಟು ಬಂದಿದ್ದರು. 
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹ್ಯಾರಿಸ್ ಅವರು, ಶನಿವಾರ ರಾತ್ರಿ ಪುತ್ರ ಹಾಗೂ ವಿದ್ವತ್ ನಡುವೆ ನಡೆದಿರುವ ಘಟನೆ ದುರಾದೃಷ್ಟಕರ. ವಿದ್ವತ್ ಹಾಗೂ ಆತನ ಪೋಷಕರೊಂದಿಗೆ ಮತ್ತೊಮ್ಮೆ ಕ್ಷಮೆಯಾಚಿಸುತ್ತಿನೆ. ನಗರ ಜನತೆಯ ಬಳಿ ಕ್ಷಮೆಯಾಚಿಸುತ್ತೇನೆ. ಘಟನೆ ನಡೆದಿರುವುದು ದುರಾದೃಷ್ಟಕರ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ. 
ಪುತ್ರ ನಪಪಾಡ್ ತಡರಾತ್ರಿ ತಾಯಿಗೆ ಕರೆ ಮಾಡಿದ್ದ. ಈ ವೇಳೆ ನಾನು ಕೂಡ ಆತನ ಜೊತೆಗೆ ಮಾತನಾಡಿದ್ದೇನೆ. ಠಾಣೆಗೆ ಹೋಗಿ ಶರಣಾಗುವಂತೆ ಸೂಚಿಸಿದ್ದೇನೆ. ಒಬ್ಬ ತಂದೆಯಾಗಿ ಪೊಲೀಸರಿಗೆ ಮಗನನ್ನು ಒಪ್ಪಿಸುತ್ತಿದ್ದೇನೆ ಎಂದರೆ, ನಾನು ಯಾವ ಸ್ಥಿತಿಗೆ ಬಂದು ನಿಂತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 
ತಪ್ಪು ಯಾರೇ ಮಾಡಿದ್ದರೂ ತಪ್ಪು. ಅವರ ಬೆಂಬಲಕ್ಕೆ ನಾನು ನಿಲ್ಲುವುದಿಲ್ಲ. ನಲಪಾಡ್ ನನ್ನು ಪೊಲೀಸರ ವಶಕ್ಕೆ ಒಪ್ಪಿಸುತ್ತೇನೆ. ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ. 
ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಅವರು, ಮಾಧ್ಯಮಗಳು ರಾಜ್ಯಕ್ಕಾಗಿ 9 ವರ್ಷಗಳ ಸಮರ್ಪಣೆ, ನಂಬಿಕಸ್ತ ಸೇವೆ, ಅಭಿವೃದ್ಧಿ ಕಾರ್ಯಗಳನ್ನು ನಾಶಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳು ಎಂತಹ ಕೀಳು ಮಟ್ಟದಲ್ಲಿ ಪಾತ್ರವಹಿಸುತ್ತಿವೆ ಎಂಬುದು ಬಹಳ ಬೇಸರವನ್ನುಂಟು ಮಾಡಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಶೇ.100ರಷ್ಟು ಸಹಕಾರವನ್ನು ನೀಡುತ್ತೇನೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com