ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿನ ಶ್ರೀಗಂಧ ಮರ ಕಡಿತ ಬಗ್ಗೆ ಆರ್ ಟಿಐಯಡಿ ಪ್ರತಿಕ್ರಿಯಿಸದ ಸಾಯಿ (SAI) ಪ್ರಾದೇಶಿಕ ವಲಯದ ನಿರ್ದೇಶಕ ಶ್ಯಾಮ್ ಸುಂದರ್ ಅವರಿಗೆ ಕೇಂದ್ರ ಮಾಹಿತಿ ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಂತೆ ಕೆಂಗೇರಿ ಬಳಿ ಭಾರತೀಯ ಕ್ರೀಡಾ ಪ್ರಾಧಿಕಾರವಿದ್ದು,ಮಾಹಿತಿ ಏಕೆ ನೀಡುತ್ತಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಕೇಂದ್ರಮಾಹಿತಿ ಆಯೋಗದ ಅಧ್ಯಕ್ಷ ಶ್ರೀಧರ್ ಆಚಾರ್ಯಲು ಅವರು ಶ್ಯಾಮ್ ಸುಂದರ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
SAI ಆವರಣದಲ್ಲಿ ಎಷ್ಟು ಶ್ರಿಗಂಧ ಮರ ಕಡಿತವಾಗಿದೆ ಎಂಬ ಬಗ್ಗೆ ಇಲ್ಲಿನ ಹಾಗೂ ಅರಣ್ಯ ಅಧಿಕಾರಿಗಳಿಗೆ ಗೊತ್ತಿಲ್ಲ,ಮರಗಳನ್ನು ಸಂರಕ್ಷಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ವೀರಯ್ಯ ಹಿರೇಮಠ್ ಎಂಬವರು ಆರ್ ಟಿಐಯಡಿ ಅರ್ಜಿ ಸಲ್ಲಿಸಿದ್ದರು.
ಇಲ್ಲಿನ ಮರಗಳ ಕಡಿತ ಮುಂದುವರೆದಿದ್ದರೂ ಯಾರೊಬ್ಬರು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ವೀರಯ್ಯ ಹಿರೆೇಮಠ್, 2011ರಿಂದಲೂ ಇಲ್ಲಿ ಶ್ರೀಗಂಧ ಮರ ಕಡಿತವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಆರೋಪಿಸಿದರು.
ಈ ಸಂಬಂಧ ಕೇಂದ್ರ ಮಾಹಿತಿ ಆಯೋಗದಿಂದ ಸಾಯಿಗೆ ಪತ್ರ ಬರೆಯಲಾಗಿದ್ದು, ಗಸ್ತು ಸೇರಿದಂತೆ ಸಿಸಿಟಿವಿ, ವಿದ್ಯುತ್ ದೀಪ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement