ಕಳೆದ 13 ವರ್ಷಗಳಿಂದ ಕಳ್ಳತನ ಕೃತ್ಯಗಳಲ್ಲಿ ತೊಡಗಿರುವ ಆರೋಪಿ ಕಾರ್ತಿಕ್ ವಿರುದ್ಧ ಮೈಸೂರು, ಹಾಸನ ಸೇರಿದಂತೆ ಬೆಂಗಳೂರು ನಗರದ 26 ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಸುಮಾರು 70 ಅಪರಾಧ ಪ್ರಕರಣಗಳು ದಾಖಲಾಗಿವೆ. ಹೆಣ್ಣೂರು ನಿವಾಸಿಯಾಗಿರುವ ಕಾರ್ತಿಕ್, 6ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾನೆ. 2005ರಲ್ಲಿ 16ನೇ ವಯಸ್ಸಿನಲ್ಲೇ ಕಳ್ಳತನಕ್ಕೆ ಇಳಿದಿದ್ದ. ಹೆಣ್ಣೂರಿನ ಒಂದು ಮನೆಯ ಕಿಟಕಿ ಮುರಿದು ಮನೆಯಲ್ಲಿದ್ದ 10 ಲಕ್ಷ ರೂ. ನಗದು ಕಳ್ಳತನ ಮಾಡಿದ್ದ. ಮೊದಲ ಬಾರಿಯೇ ಭಾರಿ ಹಣ ಸಿಕ್ಕ ಕಾರಣ, ಕಳ್ಳತನ ವೃತ್ತಿಯನ್ನೇ ಮುಂದುವರೆಸಿದ್ದ. ಸಹಚರರ ಜತೆ ಸೇರಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಿಟಕಿ, ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡುತ್ತಿದ್ದ. ಬಳಿಕ ಆಭರಣಗಳನ್ನು ಅಡ ಇಟ್ಟು ಮೋಜಿನ ಜೀವನ ನಡೆಸುತ್ತಿದ್ದ. ಎರಡು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದ ಆರೋಪಿ, ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಕಳ್ಳತನ ಮಾಡಿದ್ದ. ಈತ ಬರಿ ಬೆಂಗಳೂರಿನಲ್ಲಷ್ಟೇ ಅಲ್ಲ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಕೈಚಳಕ ತೋರಿಸಿದ್ದಾನೆ. 70ಕ್ಕೂ ಹೆಚ್ಚಿನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತನ ಬಂಧನದಿಂದ ಕೊತ್ತನೂರು ಠಾಣೆಯಲ್ಲಿ ವರದಿಯಾಗಿದ್ದ 5 ಪ್ರಕರಣಗಳು, ಹಾಸನ 2, ಮೈಸೂರಿನ 1 ಪ್ರಕರಣ ಸೇರಿ 8 ಪ್ರಕರಣಗಳು ಪತ್ತೆಯಾಗಿವೆ.