ಬೆಂಗಳೂರು: ಈ ಹಿಂದೆ ಹೋಯ್ಸಳ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ರೌಡಿ ಶೀಟರ್ ಮೇಲೆ ಪೊಲೀಸರು ಬುಧವಾರ ಗುಂಡು ಹಾರಿಸಿದ್ದು, ಜೆಜೆ ನಗರ ಪೊಲೀಸ್ ಠಾಣೆಯ ಪೇದೆ ರಾಜೇಂದ್ರ ಮೇಲೆ ಹಲ್ಲೆ ನಡೆಸಿದ್ದ ಆಲೀಂಖಾನ್ ಕಾಲಿಗೆ ಗುಂಡಿಕ್ಕಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಜನವರಿ 16ರಂದು ಹೋಯ್ಸಳ ವಾಹನದ ಚಾಲಕ ರಾಜೇಂದ್ರ ಮೇಲೆ ಹಲ್ಲೆ ನಡೆಸಿದ್ದ ಆಲೀಂ ಖಾನ್ ಬಂಧಿಸಲು ಇಂದು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಮತ್ತೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆಜೆ ನಗರ ಪೊಲೀಸರು ಅಲೀಂಖಾನ್ನನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಿಕೊಂಡಿದ್ದರು. ಆರೋಪಿ ನೈಸ್ ರಸ್ತೆಯ ಬಳಿ ಇದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆದ ಜೆಜೆ ನಗರ ಇನ್ಸ್ಪೆಕ್ಟರ್ ಲಿಂಗರಾಜು ಮತ್ತು ಇತರ ಮೂವರು ಸಿಬ್ಬಂದಿ ಉಲ್ಲಾಳದ ಚಿಕ್ಕಬಸ್ತಿ ಬಳಿ ಅಲೀಂ ಖಾನ್ನನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಅಲೀಂ ಖಾನ್ ಮತ್ತೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಲಿಂಗರಾಜು ಆರೋಪಿ ಕಾಲಿಗೆ ಗುಂಡಿಕ್ಕಿದ್ದಾರೆ. ಆರೋಪಿಯ ಕಾಲುಗಳಿಗೆ ಎರಡು ಗುಂಡು ತಗುಲಿದ್ದು, ಗಾಯಗೊಂಡಿರುವ ಅಲೀಂ ಖಾನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ವಿರುದ್ಧ ಕೊಲೆ, ರಾಬರಿ, ಕಳ್ಳತನ ಸೇರಿದಂತೆ ಹಲವು ಪ್ರಕರಣ ದಾಖಲಾಗಿದ್ದು, ಈಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.