ಬೆಂಗಳೂರು: ಎಚ್ ಎಎಲ್ ವಿಮಾನ ನಿಲ್ದಾಣ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಸಂಭವಿಸಿದ್ದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂಲದ ಅರ್ಥಮೂವರ್ಸ್ ಸಂಸ್ಥೆಯ ಮಾಲೀಕ , ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಭವಿಸಿದ ಸ್ಪೋಟದಿಂದ ಆ ಬಡಾವಣೆಯಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ಸ್ಪೋಟಕ್ಕೆ ಅಮೋನಿಯಂ ನೈಟೈಟ್ ಬಳಕೆ ಬಗ್ಗೆ ಸಂಬಂಧಿತ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಮಿಕಾ ಅರ್ಥ್ ಮೂವರ್ಸ್ ಅರುಣ್ ಕುಮಾರ್ (38) ಮ್ಯಾನೇಜರ್ ( 26) ಕಿರಣ್ ಬಂಧಿತ ಆರೋಪಿಗಳು.
ಈ ಕಂಪನಿ ಪೀಣ್ಯ ಬಳಿಯ ಟಿ. ದಾಸರಹಳ್ಳಿಯಲ್ಲಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಮಂಗಳವಾರ ಸಂಭವಿಸಿದ ಸ್ಪೋಟದಿಂದ ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಗಿತ್ತು. ಜಿಲಿಟನ್ ಕಡ್ಡಿಯಿಂದ ಸ್ಪೋಟ ಸಂಭವಿಸಿರಬಹುದೆಂದು ಮೊದಲಿಗೆ ಶಂಕಿಸಲಾಗಿತ್ತು. ಆದರೆ. ಎಫ್ ಎಸ್ ಎಲ್ ತಜ್ಞರು ತಪಾಸಣೆ ನಡೆಸಲಾಗಿ ಬಂಡೆಗಳನ್ನು ಸ್ಫೋಟಿಸಲು ಅಮೋನಿಯಂ ನೈಟ್ರೇಟ್ ಬಳಸಿರುವುದು ಕಂಡುಬಂದಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಚ್ಚತಾ ಕಾರ್ಯವನ್ನು ಕೂಡಾ ಕೈಗೊಂಡಿದ್ದ ಕಂಪನಿ ಉಳಿದಿರುವ ಅಮೋನಿಯಂನ್ನು ತ್ಯಾಜ್ಯ ಸುರಿಯುವ ತೊಟ್ಟಿಯಲ್ಲಿ ಹಾಕಿತ್ತು. ಇದರ ಬಗ್ಗೆ ಅರಿಯದ ಕಾರ್ಮಿಕರು ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದರು. ಇದರಿಂದ ಸ್ಪೋಟ ಸಂಭವಿಸಿತ್ತು.
ಸ್ಪೋಟ ಸಂಭವಿಸಿದ ಕೂಡಲೇ ಶ್ವಾನ ದಳ ಹಾಗೂ ಎಫ್ ಎಸ್ ಎಲ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದ್ದರು.
Advertisement