7 ತಿಂಗಳಿಂದ ಪಾವತಿಯಾಗದ ವೇತನ: ನೊಂದ ಬಿಬಿಎಂಪಿ ಪೌರ ಕಾರ್ಮಿಕ ಆತ್ಮಹತ್ಯೆ

7 ತಿಂಗಳಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಸಂಸಾರ ನಡೆಸಲು ಕಷ್ಟವಾದ್ದರಿಂದ ಬಿಬಿಎಂಪಿ ನೌಕರನೊಬ್ಬ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ...
ಮೃತ ಸುಬ್ರಮಣಿ ಪತ್ನಿ ಮತ್ತು ಮಕ್ಕಳು
ಮೃತ ಸುಬ್ರಮಣಿ ಪತ್ನಿ ಮತ್ತು ಮಕ್ಕಳು
Updated on
ಬೆಂಗಳೂರು: 7 ತಿಂಗಳಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಸಂಸಾರ ನಡೆಸಲು ಕಷ್ಟವಾದ್ದರಿಂದ ಬಿಬಿಎಂಪಿ ನೌಕರನೊಬ್ಬ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಪೈಪ್ ಲೈನ್ ರಸ್ತೆಯ ನಾಗಪ್ಪ ಸ್ಟ್ರೀಟ್ ನಲ್ಲಿ ನಡೆದಿದೆ,
ಸುಬ್ರಮಣಿ (40) ಮೃತಪಟ್ಟವರು. ಇವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸುಬ್ರಮಣಿ ಅವರು ಭಾನುವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿಯೇ ಸಾವನ್ನಪ್ಪಿದ್ದಾರೆ. 
ಗುತ್ತಿಗೆ ಆಧಾರದಲ್ಲಿ ಕಳೆದ 18 ವರ್ಷಗಳಿಂದ ಸುಬ್ರಮಣಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷದ ಡಿಸೆಂಬರ್ ನಲ್ಲಿ ಕೆಲಸ ಖಾಯಂ ಆಗಿತ್ತು. 2000 ಇಸವಿಯಲ್ಲಿ 5 ಸಾವಿರ ರು, ಸಂಬಳಕ್ಕೆ ಸೇರಿದ ಸುಬ್ರಮಣಿಗೆ 14 ಸಾವಿರ ರು ವೇತನ ಬರುತ್ತಿತ್ತು.
ವಿಷಯ ತಿಳಿದು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ಮೃತ ಸುಬ್ರಮಣಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದರು. ಈ ವೇಳೆ ಆಸ್ಪತ್ರೆ ಮುಂದೆ ಜಮಾಯಿಸಿದ್ದ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿ, ಸಂಬಳ ನೀಡದೆ ಸತಾಯಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 
ಕಳೆದ 6 ತಿಂಗಳಿನಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆ ಮಾಡಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಪಾಲಿಕೆ ಅಧಿಕಾರಿಗಳೇ ಹೊಣೆ,'' ಎಂದು ಸಂಬಂಧಿಕರು ಮತ್ತು ಸಹೋದ್ಯೋಗಿ ಕಾರ್ಮಿಕರು ದೂರಿದರು.  
''ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸುಮಾರು 8-9 ಸಾವಿರ ಪೌರ ಕಾರ್ಮಿಕರಿಗೆ 5-6 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಹೀಗಾಗಿ, ಮನೆ ಬಾಡಿಗೆ, ದಿನಸಿ ಖರೀದಿಗೆ ಹಲವರ ಬಳಿ ಸಾಲ ಮಾಡಿದ್ದಾರೆ. ಹಲವರು ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಕಾರಣದಿಂದ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,'' ಎಂದು ಬಿಬಿಎಂಪಿ ಪೌರ ಕಾರ್ಮಿಕರ ಸಂಘವು ಆರೋಪಿಸಿದೆ. 
ಜನವರಿಯಿಂದ ಈವರೆಗೆ ಕೆಲಸ ಮಾಡಿರುವ ಮತ್ತು ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಿರುವ ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್‌ ಹಾಜರಾತಿ ಅನ್ವಯ ವೇತನ ಪಾವತಿಸಿ, ಕೆಲಸದಿಂದ ತೆಗೆದು ಹಾಕಲು ಮೇ 25ರಂದು ಆದೇಶ ಹೊರಡಿಸಲಾಗಿದೆ. ಇದರಿಂದ 2-3 ಸಾವಿರ ಪೌರ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿ, ಬಯೋಮೆಟ್ರಿಕ್‌ ಹಾಜರಾತಿ ಪಡೆದು ವೇತನ ಪಾವತಿಸಲು ತೀರ್ಮಾನಿಸಲಾಗಿದೆ. ಇವರನ್ನು 60 ವರ್ಷ ಮೇಲ್ಪಟ್ಟ ಕಾರ್ಮಿಕರ ಬದಲಿಗೆ ನಿಯೋಜಿಸಲಾಗುತ್ತಿದೆ. 
ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ . ಪರಮೇಶ್ವರ ಸುಬ್ರಮಣಿ ಅನಾರೋಗ್ಯದಿಂದ ಬಳಲುತ್ತಿದ್ದ ಎಂಬ ಮಾತು ಕೇಳಿ ಬಂದಿದೆ. ತನಿಖೆ ನಂತರ ಸೂಕ್ತ ಕ್ರಮ ಘೋಷಿಸಲಾಗುವುದ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com