ಪ್ರತಿ ತಿಂಗಳ 7ನೇ ತಾರೀಖು ಪೌರ ಕಾರ್ಮಿಕರಿಗೆ ವೇತನ ನೀಡಲು ಮೇಯರ್ ಆಗ್ರಹ
ಬೆಂಗಳೂರು: ಪೌರಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರೀಖಿನಂದು ವೇತನ ನೀಡಬೇಕೆಂದು ಮತ್ತು ಇನ್ನು ಎರಡು ಮೂರು ದಿನಗಳೊಳಗೆ ಜೂನ್ ತಿಂಗಳವರೆಗಿನ ಪೌರ ಕಾರ್ಮಿಕರ ಎಲ್ಲಾ ಬಾಕಿ ವೇತನವನ್ನು ಪಾವತಿ ಮಾಡಬೇಕೆಂದು ಮೇಯರ್ ಸಂಪತ್ ರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜರಾಜೇಶ್ವರಿ ನಗರ ಮತ್ತು ದಕ್ಷಿಣ ವಲಯದ ಅಧಿಕಾರಿಗಳೊಂದಿಗೆ ನಿನ್ನೆ ಸಭೆ ನಡೆಸಿದ ಅವರು, ಪೌರಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರೀಖಿನಂದು ವೇತನ ಪಾವತಿ ಮಾಡಬೇಕು ಅಲ್ಲದೆ ಜೂನ್ ತಿಂಗಳವರೆಗಿನ ಬಾಕಿ ವೇತನವನ್ನು ಪಾವತಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಯಾವ ವಲಯದಲ್ಲಿ ಅಧಿಕ ಕಾರ್ಮಿಕರಿರುತ್ತಾರೆಯೋ ಅವರನ್ನು ಬೇರೆ ವಲಯಗಳಿಗೆ ವರ್ಗಾವಣೆ ಮಾಡಬೇಕೆಂದು ಸಂಪತ್ ರಾಜ್ ಆದೇಶ ಹೊರಡಿಸಿದ್ದಾರೆ. 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಕಾರ್ಮಿಕರಿಗೆ ಕರ್ತವ್ಯದಿಂದ ಮುಕ್ತಿ ನೀಡಬೇಕೆಂದು ಮತ್ತು ಹೆಚ್ಚು ಸಂಖ್ಯೆಯ ಕಾರ್ಮಿಕರಿದ್ದರೆ ಅವರನ್ನು ಬೇರೆ ವಲಯಗಳಿಗೆ ವರ್ಗಾಯಿಸಬೇಕೆಂದು ಸಭೆಯಲ್ಲಿ ಮೇಯರ್ ಆದೇಶ ಹೊರಡಿಸಿದ್ದಾರೆ ಎಂದು ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತ ಎನ್ ಸಿ ಜಗದೀಶ್ ತಿಳಿಸಿದ್ದಾರೆ.