ಕಲಬುರಗಿ: ಅನಾಥ ಮುಸ್ಲಿಂ ಯುವತಿಯನ್ನು ಹಿಂದೂ ಸಂಪ್ರದಾಯದಂತೆ ಬ್ರಾಹ್ಮಣ ಯುವಕ ವಿವಾಹವಾಗಿದ್ದಾರೆ.
ರಾಜ್ಯ ಮಹಿಳಾ ನಿಲಯದ ನಿವಾಸಿಯಾದ ಶಬಾನಾಳನ್ನು ಬೀದರ್ ಜಿಲ್ಲೆಯ ಮನ್ನಳ್ಳಿ ಗ್ರಾಮದ ವಿಕ್ರಮ್ ಎಂಬುವರು ಜೂನ್ 21ರಂದು ಕನ್ಯಾಲಗ್ನದ ಶುಭ ಮುಹೂರ್ತದಲ್ಲಿ ವಿವಾಹವಾಗಿದ್ದಾರೆ.
ವಿಕ್ರಮ್ ಅನಾಥ ಹುಡುಗಿಯನ್ನು ಮದುವೆಯಾಗಬೇಕು ಎಂಬ ಇಚ್ಛೆ ಹೊಂದಿದ್ದರು. ಅದರಂತೆ ತಮ್ಮ ಕುಟುಂಬಸ್ಥರೊಂದಿಗೆ ವಿಕ್ರಮ್ ಮಹಿಳಾ ನಿಲಯಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಶಬಾನಾ ಅವರನ್ನು ಇಷ್ಟಪಟ್ಟಿದ್ದರು.
ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹಿರಿಯ ಅಧಿಕಾರಿಗಳಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಿಕ್ರಮ್ ಮತ್ತು ಶಬಾನಾ ಅವರ ಮದುವೆ ನಡೆದಿದೆ.
ಶಬಾನಾ 7 ವರ್ಷದವಳಿದ್ದಾಗ 2004ರಲ್ಲಿ ಯಾದಗಿರಿಯ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು. 18 ವರ್ಷವಾದ ಬಳಿಕ ಶಬಾನಾ ಕಲಬುರಗಿಯ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಾಗಿದ್ದಳು. ಶಬಾನಾ ಪ್ರಥಮ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾಳೆ.