ಅಧಿಕಾರಿಗಳು ಕಮೀಷನ್ಗಾಗಿ ಇಲಾಖೆಗಳಿಗೆ 4-5 ಕೋಟಿ ರೂ. ನಷ್ಟ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ, ಕೈ ಕೆಲಸಗಾರರಿಗೆ, ರೇಷ್ಮೆ ರೈತರಿಗೆ, ಹಾಲು ಉತ್ಪಾದಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ದೂರಿನಲ್ಲಿ ತೇಜರಾಜ್ ಹೇಳಿದ್ದಾನೆ. ಅಂತೆಯೇ ಈ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿರುವ ತೇಜ್ ರಾಜ್, ಕಳೆದ ಆರು ತಿಂಗಳಿನಿಂದ ಲೋಕಾಯುಕ್ತ ಕಚೇರಿಯಲ್ಲಿ ಹಲವರ ಅಕ್ರಮಗಳ ವಿರುದ್ಧ ದೂರು ದಾಖಲಿಸಿದ್ದೆ. ಆದರೆ ನನ್ನ ದೂರಿನ ಬಗ್ಗೆ ಲೋಕಾಯಕ್ತ ಅಧಿಕಾರಿಗಳು ಗಮನಹರಿಸಿರಲಿಲ್ಲ. ಈ ಹಿಂದೆ ಮೂರು ಬಾರಿ ಲೋಕಾಯುಕ್ತರನ್ನು ಭೇಟಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆಕ್ರಮಗಳ ಕುರಿತು ದೂರುಗಳ ಮೇಲೆ ದೂರು ಕೊಟ್ಟರೂ ಲೋಕಾಯುಕ್ತ ಕಚೇರಿಯಿಂದ ಸೂಕ್ತ ಉತ್ತರ ಬಂದಿರಲಿಲ್ಲ. ಆದರೆ ಸಾಕ್ಷ್ಯಾಧಾರ ಕೊರತೆ ಎಂದು ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದರು. ನ್ಯಾಯ ಸಿಗದೆ ಹತಾಶೆಗೊಂಡು ಕೃತ್ಯ ಎಸಗಿದೆ ಎಂದು ತೇಜರಾಜ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.