ಸರ್ದಾರ್ ವಲ್ಲಭ ಭಾಯ್ ಪಟೇಲರ 'ಏಕತೆಯ ಪ್ರತಿಮೆ'ಯಲ್ಲಿ 'ಕನ್ನಡವಿಲ್ಲ' ಎಂಬ ಸುದ್ದಿ ಸುಳ್ಳು!

ಬುಧವಾರವಷ್ಟೇ ಲೋಕಾರ್ಪಣೆಯಾದ ಸರ್ದಾರ್ ವಲ್ಲಭ ಭಾಯ್ ಪಟೇಲರ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಬಳಿ ಹಾಕಲಾಗಿದ್ದ ನಾಮಫಲಕದಲ್ಲಿ ಕನ್ನಡವೇ ಇರಲಿಲ್ಲ ಎಂಬ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದೆ.
ಸರ್ದಾರ್ ಪಟೇಲರ ಸ್ಮಾರಕದ ಬಳಿ ಇರುವ ನಾಮಫಲಕದಲ್ಲಿ ಕನ್ನಡ
ಸರ್ದಾರ್ ಪಟೇಲರ ಸ್ಮಾರಕದ ಬಳಿ ಇರುವ ನಾಮಫಲಕದಲ್ಲಿ ಕನ್ನಡ
ಅಹಮದಾಬಾದ್: ಬುಧವಾರವಷ್ಟೇ ಲೋಕಾರ್ಪಣೆಯಾದ ಸರ್ದಾರ್ ವಲ್ಲಭ ಭಾಯ್ ಪಟೇಲರ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಬಳಿ ಹಾಕಲಾಗಿದ್ದ ನಾಮಫಲಕದಲ್ಲಿ ಕನ್ನಡವೇ ಇರಲಿಲ್ಲ ಎಂಬ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದೆ.
ಗುಜರಾತ್‌ ನ ನರ್ಮದಾ ಜಿಲ್ಲೆಯ ಕೆವಾಡಿಯ ಸಮೀಪ ಸ್ಥಾಪಿಸಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯ ಬಳಿ ಇರುವ ಫಲಕದಲ್ಲಿ ಕನ್ನಡವನ್ನು ಹೊರತುಪಡಿಸಿ ಉಳಿದ ಭಾಷೆಗಳಲ್ಲಿ ನಾಮಫಲಕ ಹಾಕಲಾಗಿದೆ.  ಕೇಂದ್ರ ಸರ್ಕಾರ ಕನ್ನಡವನ್ನು ನಿರ್ಲಕ್ಷಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಆದರೆ ಇದೀಗ ಬಂದಿರುವ ಸುದ್ದಿಗಳ ಅನ್ವಯ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯೇ ಸುಳ್ಳು ಎನ್ನಲಾಗುತ್ತಿದೆ.
ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿಯಲ್ಲಿ ಪ್ರತಿಮೆ ಬಳಿಯ ನಾಮಫಲಕದಲ್ಲಿ ತಮಿಳು ಲಿಪಿಯಲ್ಲಿ ತಪ್ಪಾಗಿ Statue of Unity ಎಂದು ಬರೆದಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಕನ್ನಡ ನಾಪತ್ತೆಯಾಗಿತ್ತು ಎಂದು ಹೇಳಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫಲಕದ ಚಿತ್ರ ಫೇಕ್ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ್ದು, ಉದ್ಘಾಟನೆಯಾದ ಸಂದರ್ಭದಲ್ಲಿ ಅಲ್ಲಿ ನಾಮಫಲಕವೇ ಇರಲಿಲ್ಲ ಎಂದೂ ಹೇಳಲಾಗಿದೆ.
ಪ್ರಸ್ತುತ ಅಳವಡಿಸಲಾಗಿರುವ ಅಧಿಕೃತ ನಾಮಫಲಕ ಕನ್ನಡ ಮತ್ತು ತಮಿಳು ಸೇರಿದಂತೆ ದೇಶದ ಎಲ್ಲ 22 ಅಧಿಕೃತ ಭಾಷೆಗಳನ್ನೂ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಏನಿದು ಚಿತ್ರ?
ಪಟೇಲ್ ಪ್ರತಿಮೆ ಬಳಿ ಇರುವ ಫಲಕದಲ್ಲಿ 10 ಭಾಷೆಗಳಲ್ಲಿ Statue of Unity ಎಂದು ಬರೆಯಲಾಗಿದೆ. ದಕ್ಷಿಣ ಭಾರತದ ಭಾಷೆಗಳ ಪೈಕಿ ತಮಿಳು ಲಿಪಿಯಲ್ಲಿ  Statue of Unity ಎಂದು ಬರೆಯಲಾಗಿದ್ದರೂ ಅಲ್ಲಿ ಅಕ್ಷರ ತಪ್ಪುಗಳಾಗಿವೆ ಎಂದು ಹೇಳಲಾಗಿತ್ತು. ಅದೇ ವೇಳೆ ಬರೀ ತಮಿಳು ಭಾಷೆಯಲ್ಲಿ ಮಾತ್ರ ಏಕೆ ಕನ್ನಡ ಭಾಷೆಯಲ್ಲಿ ಯಾಕಿಲ್ಲ ಎಂದು ಕನ್ನಡಿಗರು ಪ್ರಶ್ನಿಸಿದರೆ, ತೆಲುಗು ಕೈ ಬಿಟ್ಟಿರುವ ಬಗ್ಗೆ ತೆಲುಗಿನವರೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಉದ್ಘಾಟನೆ ವೇಳೆ ಫಲಕ ಅಲ್ಲಿರಲಿಲ್ಲ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫಲಕದ ಚಿತ್ರ ಸುಳ್ಳು ಸುದ್ದಿಯಾಗಿದ್ದು, ಬುಧವಾರ ಪ್ರತಿಮೆ ಉದ್ಛಾಟನೆ ವೇಳೆ ಆ ಫಲಕ ಇರಲಿಲ್ಲ. ತಪ್ಪಾಗಿ ತಮಿಳು ಅನುವಾದ ಮಾಡಿರುವ ಫಲಕದ ಚಿತ್ರ ಯಾರೋ ದುರುದ್ದೇಶದಿಂದ  ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ನಿಜವಾದ ಫಲಕವಾಗಿದ್ದರೆ ಅದರಲ್ಲಿ ಸರ್ಕಾರದ ಲೋಗೊ ಇರುತ್ತಿತ್ತು. ಅದೇ ವೇಳೆ ಚಿತ್ರದಲ್ಲಿ ತೋರಿಸಿದಂತೆ ಫಲಕದಲ್ಲಿ ವಿದೇಶಿ ಭಾಷೆಗಳನ್ನು ಬಳಸುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಚಿಂತನೆ ನಡೆಸಿಲ್ಲ. ನಾವು ವಿದೇಶದಿಂದ, ವಿಶೇಷವಾಗಿ ರಷ್ಯಾ ಮತ್ತು ಯುರೋಪ್‍ನಿಂದ ಪ್ರವಾಸಿಗಳು ಬರುತ್ತಾರೆ ಎಂದು ನಿರೀಕ್ಷಿಸುವುದಿಲ್ಲ. ಹಾಗೊಂದು ಫಲಕ ಹಾಕುವುದಾದರೆ ಅದರಲ್ಲಿ  ಭಾರತೀಯ ಭಾಷೆಗಳನ್ನು ಬಳಸಲಾಗುವುದು, ದೇಶದ ಏಕತೆಯನ್ನು ಬಿಂಬಿಸಲು ಇದು ಸಹಕಾರಿ ಎಂದು ಸರ್ದಾರ್ ಸರೋವರ್ ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. 
ಪಟೇಲ್ ಪ್ರತಿಮೆಯ ಬಳಿ ಇರುವ ಫಲಕದಲ್ಲಿ ಭಾರತದ 22 ಅಧಿಕೃತ ಭಾಷೆಗಳಲ್ಲಿ 'ಏಕ ಭಾರತ ಶ್ರೇಷ್ಠ ಭಾರತ' ಎಂದು ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com