ಕಾರವಾರ: ಕರ್ನಾಟಕ- ಗೋವಾ ಭಾಗದ ಮಾಜಳಿ ಚೆಕ್ ಪೋಸ್ಟ್ ಬಳಿ ನಿನ್ನೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಮೀನುಗಾರರು ಪ್ರತಿಭಟನೆ ನಡೆಸಿ, ಗೋವಾದಿಂದ ಬಂದಿದ್ದ ಐದು ಮೀನು ಕಂಟೈನರ್ ಗಳನ್ನು ತಡೆದು ಹಿಂದಕ್ಕೆ ಕಳುಹಿಸಿದರು.
ಗೋವಾ ಸರ್ಕಾರ ಆರು ತಿಂಗಳ ಕಾಲ ಕರ್ನಾಟಕ ಸೇರಿದಂತೆ ಮತ್ತಿತರ ರಾಜ್ಯಗಳ ಮೀನುಗಳಿಗೆ ನಿರ್ಬಂಧ ವಿಧಿಸಿರುವುದರ ವಿರುದ್ಧ ಗಡಿಯಲ್ಲಿ ಪ್ರತಿಭಟನೆ ನಡೆಸಿದ ಮೀನುಗಾರರು, ಇದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಸೇರಿದಂತೆ ಮತ್ತಿತರ ರಾಜ್ಯಗಳ ಮೀನುಗಳಿಗೆ ಆರು ತಿಂಗಳ ಕಾಲ ನಿರ್ಬಂಧ ವಿಧಿಸಿ ಗೋವಾ ಸರ್ಕಾರ ಕಳೆದ ವಾರ ಆದೇಶ ಹೊರಡಿಸಿತ್ತು. ಕರ್ನಾಟಕದಲ್ಲಿನ ಮೀನುಗಳಲ್ಲಿ ಪಾರ್ಮಲಿನ್ ಅಂಶ ಹೆಚ್ಚಾಗಿರುವುದರಿಂದ ಅವುಗಳನ್ನು ನಿರ್ಬಂಧಿಸಲಾಗಿದೆ ಎಂದು ಗೋವಾ ಸರ್ಕಾರ ಹೇಳಿಕೆ ನೀಡಿತ್ತು. ಇದು ಜಿಲ್ಲೆಯಲ್ಲಿ ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಸಮುದಾಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.
ಪ್ರತಿಭಟನೆ ಆರಂಭವಾಗಿನಿಂದಲೂ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕಾರವಾರ ಮತ್ತು ಅಂಕೋಲದಲ್ಲಿ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ನಿಯೋಜಿಸಲಾಗಿದೆ. ಗೋವಾ ಗಡಿ ಭಾಗದಲ್ಲೂ ಇದೇ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರನ್ನು ಹೊರತುಪಡಿಸಿದಂತೆ ಅಗ್ನಿಶಾಮಕ , ಹಾಗೂ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಸಹ ಕರ್ನಾಟಕದ ಗಡಿ ಭಾಗದಲ್ಲಿ ನಿಯೋಜಿಸಲಾಗಿದೆ.
Advertisement