ರಾಜ್ಯ
ಪ್ರಧಾನಿ ಮೋದಿಯಲ್ಲ ಕುಮಾರಸ್ವಾಮಿ ಸರ್ಕಾರವೇ ಅಪಾಯದಲ್ಲಿದೆ: ಬಿ.ಎಸ್.ಯಡಿಯೂರಪ್ಪ
ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರವೇ ಅಪಾಯದಲ್ಲಿದೆ ಎಂದು ಶನಿವಾರ ಹೇಳಿದ್ದಾರೆ...
ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರವೇ ಅಪಾಯದಲ್ಲಿದೆ ಎಂದು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳುಗಳು ಕಳೆದಿವೆ. ಆದರೂ, ಸರ್ಕಾರ ಎಲ್ಲಾ ರೀತಿಯಲ್ಲಿಯೂ ವಿಫಲಗೊಂಡಿದೆ. ಮುಂದಿನ ಚಳಿಗಾಲ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಬಹಿರಂಗಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರದ ಕಾರ್ಯವೈಖರಿ ಕರುಣಾಜನಕವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಿಗೆ ಸರ್ಕಾರ ಇನ್ನೂ ರೂ.2 ಕೋಟಿ ಬಿಡುಗಡೆ ಮಾಡಬೇಕು, ಸಹಕಾರಿ ಸಮಾಜಗಳಿಗೆ ರೂ.547 ಕೋಟಿ ಬಡ್ಡಿ ಹಾಗೂ ಹಾಲು ಸಂಘಟನೆಗಾರರಿಗೆ ರೂ.400 ಕೋಟಿ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಬಳಿಕ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ವಿರುದ್ಧ ಕೂಡ ಕಿಡಿಕಾರಿರುವ ಯಡಿಯೂರಪ್ಪ ಅವರು, ದೇವೇಗೌಡ ಅವರ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವನ್ನು ಪ್ರತೀಯೊಬ್ಬರೂ ಪ್ರಶಂಸಿಸುತ್ತಿರುವಾಗ ಮಾಜಿ ಪ್ರಧಾನಮಂತ್ರಿಗಳು ತಮ್ಮ ಹೇಳಿಕೆ ಕುರಿತಂತೆ ವಿವರಣೆ ನೀಡಲಿ. ಪ್ರಜಾಪ್ರಭುತ್ವವಲ್ಲ, ಕುಮಾರಸ್ವಾಮಿ ಸರ್ಕಾರವೇ ಅಪಾಯದಲ್ಲಿದೆ ಎಂದಿದ್ದಾರೆ.