ರಾಜಮನೆತನ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ: ಅಂಬರೀಷ್ ನಿಧನಕ್ಕೆ ಪ್ರಮೋದಾ ದೇವಿ ಸಂತಾಪ

ಮೈಸೂರು ರಾಜ ಮನೆತನ ಪ್ರಾಮಾಣಿಕ ಗೆಳೆಯ ಹಾಗೂ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ ಎಂದು ಅಂಬರೀಷ್ ನಿಧನಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿಯವರು ಸಂತಾಪ ಸೂಚಿಸಿದ್ದಾರೆ...
ರಾಜವಂಶಸ್ಥೆ ಪ್ರಮೋದಾ ದೇವಿ
ರಾಜವಂಶಸ್ಥೆ ಪ್ರಮೋದಾ ದೇವಿ
ಮೈಸೂರು: ಮೈಸೂರು ರಾಜ ಮನೆತನ ಪ್ರಾಮಾಣಿಕ ಗೆಳೆಯ ಹಾಗೂ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ ಎಂದು ಅಂಬರೀಷ್ ನಿಧನಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿಯವರು ಸಂತಾಪ ಸೂಚಿಸಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಬರೀಷ್ ಅವರು ಪ್ರಾಮಾಣಿಕ ಗೆಳೆಯರಾಗಿದ್ದರು. ಸಾಕಷ್ಟು ನೈತಿಕ ಬೆಂಬಲ ನೀಡುತ್ತಿದ್ದರು. ಯಾವುದೇ ಸಂದರ್ಭದಲ್ಲಿಯೇ ಸಮಸ್ಯೆಗಳು ಎದುರಾದರೂ ಸ್ವಇಚ್ಛೆಯಿಂದ ಬಂದು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರು. ರಾಜಮನೆತನದ ಸದಸ್ಯರೊಂದಿಗೆ ಆತ್ಮೀಯತೆಯಿಂದ ಇದ್ದರು ಎಂದು ಹೇಳಿದ್ದಾರೆ. 
ವಿಜಯದಶಮಿ ದಿನ ಮೈಸೂರು ಅರಮನೆಗೆ ಬಂದ ಸಂದರ್ಭದಲ್ಲಿ ರಾಜಮನೆತನದ ಕುಟುಂಬ ಸದಸ್ಯರು ಪಟ್ಟದ ಕತ್ತಿ ಹಿಡಿದಿರುವುದನ್ನು ನೋಡಬೇಕೆಂದು ಬಯಸಿದ್ದರು. 
ಸಂಸದರಾಗಿದ್ದಾಗ ರಾಜಧಾನಿ ದೆಹಲಿಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಭೇಟಿ ಮಾಡಿದ್ದರು. ನನ್ನ ಪತಿ ಯಾವಾಗಲೂ ತಾಳ್ಮೆ ಹಾಗೂ ಸಮಾಧಾನಕರ ವ್ಯಕ್ತಿಯಾಗಿದ್ದರಿಂದಾಗಿ ಯಾವುದೇ ಕೆಲಸವಾಗಬೇಕಿದ್ದರೂ, ಕಠಿಣವಾಗಿರಬೇಕೆಂದು ಸಲಹೆ ನೀಡಿದ್ದರು. ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದಾಗ ಕೂಡ ಅವರನ್ನು ಭೇಟಿ ಮಾಡಿದ್ದೆವು. 
ಅಚಾನಕ್ ಆಗಿ ರೆಸ್ಟೋರೆಂಟ್ ವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆವು. ಆಗ ರಾಜಮನೆತನದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೇಳಿಕೊಂಡಿದ್ದೆವು. ಈ ವೇಳೆ ಕುಟುಂಬಕ್ಕೆ ಸಹಾಯ ಮಾಡಿದ್ದರು. ಇಂತಹ ಅತ್ಯುತ್ತಮ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com