ಬೆಂಗಳೂರು: ಶಾಲೆಗೆ ಹೋಗುವಂತೆ ಪೋಷಕರ ಒತ್ತಾಯದಿಂದ ಬೇಸತ್ತ 14 ವರ್ಷದ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಬಳಿಯ ಲಗ್ಗೆರೆಯಲ್ಲಿ ನಡೆದಿದೆ.
ದರ್ಶನ್ ಆರ್. ಮೃತ ವಿದ್ಯಾರ್ಥಿ, ತುಮಕೂರಿನ ಸಿದ್ಧಗಂಗಾ ಮಠದಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಗಣೇಶ ಹಬ್ಬಕ್ಕಾಗಿ ಮನೆಗೆ ಬಂದಿದ್ದ. ದರ್ಶನ್ ತಂದೆ ರಾಜು ಪೀಣ್ಯದಲ್ಲಿ ಕಾರ್ಖಾನೆಯೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾರೆ. ಆತನ ತಾಯಿ ಲಕ್ಷ್ಮಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ. ಕೊಠಡಿಯೊಂದರಲ್ಲಿ ಆತ ನೇಣು ಬಿಗಿದುಕೊಂಡಿದ್ದಾನೆ. ಆತನ ತಾಯಿ ಮನೆಗೆ ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ಸುದ್ದಿ ತಿಳಿಸಲಾಗಿದ್ದು, ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶ ಹಬ್ಬಕ್ಕಾಗಿ ಕಳೆದ ವಾರ ಮನೆಗೆ ಬಂದಿದ್ದ ದರ್ಶನ್ , ಅಗತ್ಯವೆಂದು ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದ. ಇಂದು ಶಾಲೆಗೆ ಹೋಗುವಂತೆ ಹೇಳಿದ್ದಾಗ ಅಸಮಾಧಾನಗೊಂಡು ಕೆಲ ಹೊತ್ತು ಮಾತನಾಡಲೇ ಇಲ್ಲ. ಇದರಿಂದ ಬೇಸತ್ತು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಬಾಲಕನ ತಂದೆ ರಾಜು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ನಿಮ್ಮಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದರೆ ಸಹಾಯವಾಣಿ 080-25497777 ಮತ್ತು 104 ಆರೋಗ್ಯ ಸಹಾಯವಾಣಿ ಸಂಪರ್ಕಿಸಬಹುದು.
Advertisement