ಇಸ್ರೋ ಬೇಹುಗಾರಿಕೆ: ನಾನು ನಿರಾಪರಾಧಿ ಎಂಬುದು ಸಾರ್ವಜನಿಕವಾಗಿ ಸಾಬೀತಾಗಬೇಕು- ಸುಧೀರ್ ಕುಮಾರ್ ಶರ್ಮಾ

ಆಪ್ತ ಸ್ನೇಹಿತನಿಗೆ ಸಹಾಯ ಮಾಡಲು ಯತ್ನಿಸಿದ್ದು ನಾನು ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಕಾರಣವಾಯಿತು ಎಂದು ಇಸ್ರೋ ಕಾರ್ಮಿಕರ ಗುತ್ತಿಗೆದಾರರಾದ ಸುಧೀರ್ ಕುಮಾರ್ ಶರ್ಮಾ ಅವರು ತಮಗಾದ ಕಹಿ ಅನುಭವಗಳನ್ನು...
ಸುಧೀರ್ ಕುಮಾರ್ ಶರ್ಮಾ
ಸುಧೀರ್ ಕುಮಾರ್ ಶರ್ಮಾ
ಬೆಂಗಳೂರು: ಆಪ್ತ ಸ್ನೇಹಿತನಿಗೆ ಸಹಾಯ ಮಾಡಲು ಯತ್ನಿಸಿದ್ದು ನಾನು ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಕಾರಣವಾಯಿತು ಎಂದು ಇಸ್ರೋ ಕಾರ್ಮಿಕರ ಗುತ್ತಿಗೆದಾರರಾದ ಸುಧೀರ್ ಕುಮಾರ್ ಶರ್ಮಾ ಅವರು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.  
1994ರಲ್ಲಿ ಕೇಳಿ ಬಂದ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಸುಧೀರ್ ಅವರ ಹೆಸರೂ ಕೂಡ ಕೇಳಿ ಬಂದಿತ್ತು. ಪ್ರಕರಣ ಸಾಕಷ್ಟು ಚರ್ಚೆ ಹಾಗೂ ಸುದ್ದಿಗೆ ಗ್ರಾಸವಾಗಿತ್ತು. 
ಅಂದಿನ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಗ್ಲಾಸ್ಕೋಸ್ಮೋಸ್ ಇಂಡಿಯಾದ ಪ್ರತಿನಿಧಿಯಾಗಿದ್ದ ಡಿ. ಚಂದ್ರಶೇಖರ್ ಅವರು, ಟ್ರಿವಂಡ್ರಮ್ ವಿಮಾನ ನಿಲ್ದಾಣದಲ್ಲಿ ಇಬ್ಬರು ವಿದೇಶಿ ಮಹಿಳೆಯರನ್ನು ಭೇಟಿ ಮಾಡಿದ್ದರು. ಈ ವಿದೇಶಿ ಮಹಿಳೆಯರು ಬೆಂಗಳೂರಿನಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆಯುವ ಸಲುವಾಗಿ ನಗರಕ್ಕೆ ಬಂದಿದ್ದರು. ಆದರೆ, ಇವರಿಗೆ ಏಜೆಂಟ್ ಒಬ್ಬ ವಂಚಿಸಿತ್ತ. ಬಾಲ್ಡ್ವಿನ್ ಗರ್ಲ್ಸ್ ಹೈ ಸ್ಕೂಲ್ ಪ್ರಾಂಶುಪಾಲರ ಪತಿ ನನಗೆ ಪರಿಚಯವಿದ್ದ ಕಾರಣ ಚಂದ್ರಶೇಖರ್ ಅವರು ಮಹಿಳೆಯರಿಗೆ ಸಹಾಯ ಮಾಡುವಂತೆ ನನಗೆ ತಿಳಿಸಿದ್ದರು. ಬಳಿಕ ನಾನು ಮಹಿಳೆಯರು ಹಾಗೂ ಶಾಲಾ ಪ್ರಾಂಶುಪಾಲರ ನಡುವೆ ಮಾತುಕತೆ ನಡೆಸುವಂತೆ ಮಾಡಿದ್ದರೆ. ಪ್ರಕರಣದಲ್ಲಿ ಇದಷ್ಟೇ ನನ್ನ ಪಾತ್ರವಾಗಿತ್ತು ಎಂದು ಶರ್ಮಾ ಅವರು ಹೇಳಿಕೊಂಡಿದ್ದಾರೆ. 
ಪ್ರಕರಣದಲ್ಲಿ ನನ್ನದೇನೂ ಪಾತ್ರವೇ ಇಲ್ಲದಿದ್ದರೂ, ಪೊಲೀಸರು ನನಗೆ ಹಿಂಸೆ ನೀಡಿದ್ದರು. ಅವರು ಅಂದುಕೊಂಡಿದ್ದನ್ನು ನಾನು ಹೇಳುವಂತೆ ಮಾಡಲು ಹಿಂಸೆ ನೀಡುತ್ತಿದ್ದರು. ಪ್ರತೀ ಬಾರಿ ನನಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದರು. ಮೂರು ದಿನಗಳ ಕಾಲ ಊಟ, ನೀರನ್ನು ನೀಡಿರಲಿಲ್ಲ. ನಾನು ಸಕ್ಕರೆ ಕಾಯಿಲೆಯ ರೋಗಿಯಾಗಿದ್ದು, ನನಗೆ ಔಷಧಗಳನ್ನೂ ನೀಡಿರಲಿಲ್ಲ. ಪೊಲೀಸರು ನೀಡಿದ್ದ ಹಿಂಸೆಗೆ ನನ್ನ ಕೈ,ಕಾಯು ಸ್ವಾಧೀನವೇ ಇಲ್ಲದಂತಾಗಿತ್ತು. 
ಮೂರು ತಿಂಗಳ ಹಿಂದೆ ತಿರುವನಂತಪುರದ ವಂಚಿಯೊರ್ ಪೊಲೀಸ್ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಮಾಧ್ಯಮಗಳು ನನ್ನನ್ನು ಉದ್ಯಮಿ ಎಂದು ಹೇಳಿದ್ದವು. ನಾನು ಎರಡು ಕೊಠಡಿಗಳಿರುವ ಮನೆಯಲ್ಲಿ ನನ್ನ ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ಜೀವನ ನಡೆಸುತ್ತಿದ್ದೇನೆಂಬುದು ಯಾರಿಗೂ ಗೊತ್ತಿರಲಿಲ್ಲ. ಆರೋಪ ಕೇಳಿ ಬಂದ ಸಂದರ್ಭದಲ್ಲಿ ಚೆನ್ನೈನಲ್ಲಿ ಎರಡು ಕಾರ್ಖಾನೆಯಲ್ಲಿ ನಾನು ಕಾರ್ಮಿಕರ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದೆ. ಇದೀಗ ಆ ಎರಡು ಕಾರ್ಖಾನೆಯಲ್ಲಿ ಒಂದು ಕಾರ್ಖಾನೆ ಮುಚ್ಚಿ ಹೋಗಿದೆ. 
1994ರ ನವೆಂಬರ್ ನನ್ನ ವಿರುದ್ಧ ಆರೋಪ ಕೇಳಿಬಂದಾಗ ಇಸ್ರೋ ಪದದ ಸಂಪೂರ್ಣ ಅರ್ಥ ಕೂಡ ನನಗೆ ಗೊತ್ತಿರಲಿಲ್ಲ. ನಾರಾಯಣ್ ಅವರನ್ನು ಜೈಲಿನಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ನನ್ನ ಇಬ್ಬರು ಪುತ್ರಿಯರು ಎರಡು ವರ್ಷದ ಪುಟ್ಟ ಮಕ್ಕಳಾಗಿದ್ದರು. 
ಶರ್ಮಾ ಅವರ ತಂದೆ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಆಗಿದ್ದು, ದೇಶ ವಿರೋಧಿ ಚಟುವಟಿಕೆ ಸಂಬಂಧ ತಮ್ಮ ಪುತ್ರ ಬಂಧನಕ್ಕೊಳಗಾಗಿದ್ದಾನೆಂಬ ವಿಚಾರ ತಿಳಿಯುತ್ತಿದ್ದಂತೆಯೇ ಅವರು ಮೃತಪಟ್ಟಿದ್ದರು. ಶರ್ಮಾ ಅವರ ತಂದೆ 30 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ್ದರು. ಮಗನ ಬಂಧನದಿಂದ ಆಘಾತಕ್ಕೊಳಗಾದ ತಾಯಿ ಕೂಡ ಕೋಮಾ ಸ್ಥಿತಿಗೆ ತಲುಪಿದ್ದರು. 
ನನ್ನನ್ನು ಪೊಲೀಸರು ಬಂಧನಕ್ಕೊಳಪಡಿಸಿದಾಗ ನನ್ನ ಮಕ್ಕಳ ಸ್ನೇಹಿತರು ಅವರನ್ನು ಹೇಗೆ ಹೀಯಾಳಿಸುತ್ತಿದ್ದರು ಎಂಬುದನ್ನು ಪುತ್ರಿಯರು ವಿವರಿಸುತ್ತಿದ್ದರು. ಆಗ ನನ್ನ ಕರುಳು ಕಿತ್ತುಬರುವಂತಾಗುತ್ತಿತ್ತು ಎಂದು ಶರ್ಮಾ ಅವರು ಹೇಳಿದ್ದು, ಇದೀಗ ಸಾರ್ವಜನಿಕವಾಗಿ ನಾನು ನಿರಾಪರಾಧಿ ಎಂಬುದು ಸಾಬೀತಾಗಬೇಕೆಂದು ಆಗ್ರಹಿಸುತ್ತಿದ್ದಾರೆ. 
ಶರ್ಮಾ ಅವರ ಪತ್ನಿ ಕಿರಣ್ ಅವರು ಮಾತನಾಡಿ, ಜನರು ನನ್ನ ಸ್ಥೈರ್ಯವನ್ನು ಕುಸಿಯುವಂತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಪ್ರತೀ ರಾತ್ರಿ ನಮಗೆ ಬೆದರಿಕೆಗಳ ಕರೆಗಳು ಬರುತ್ತಿದ್ದವು. ಆದರೆ, ಪತಿಯೊಂದಿಗೆ ನಿಲ್ಲಬೇಕೆಂಬುದು ನನ್ನ ದೃಢ ನಿರ್ಧಾರವಾಗಿತ್ತು. ವಕೀಲರಿಗಾಗಿ ಕಾರು ಹಾಗೂ ಆಭರಣಗಳನ್ನು ಮಾರಿದ್ದೆವು. ಸರಿಯಾಗಿ ನೆಲೆಯೂರಲು ಆ ಸಂದರ್ಭದಲ್ಲಿ ಮನೆ ಕೂಡ ಇರಲಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com