ರಾಜ್ಯ
ಬೆಂಗಳೂರಿನ ಹಲವು ಖಾಸಗಿ ಶಾಲೆಗಳಲ್ಲಿ ಬೇಸಿಗೆ ರಜೆ ಕಡಿತ, ಪೋಷಕರಲ್ಲಿ ಅಸಮಾಧಾನ
ಬೇಸಿಗೆ ರಜೆಯೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿಯಿರುತ್ತದೆ. ರಜಾದಲ್ಲಿ ಆಟ, ಓಟ, ಊಟ, ತುಂಟಾಟ ...
ಬೆಂಗಳೂರು: ಬೇಸಿಗೆ ರಜೆಯೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿಯಿರುತ್ತದೆ. ರಜಾದಲ್ಲಿ ಆಟ, ಓಟ, ಊಟ, ತುಂಟಾಟ ಎಂದು ಕಳೆದುಹೋಗುವ ಮಕ್ಕಳಿಗೆ ಎರಡು ತಿಂಗಳು ಹೇಗೆ ಕಳೆಯಿತು ಎಂದೇ ಗೊತ್ತಾಗುವುದಿಲ್ಲ. ರಜೆಯ ಖುಷಿಯನ್ನು ಅನುಭವಿಸುವ ಮನೋಭಾವ ಪ್ರೈಮರಿ ತರಗತಿಯಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಲ್ಲಿ ಕೂಡ ಇರುತ್ತದೆ.
ಆದರೆ ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಈ ಬಾರಿ ಬೇಸಿಗೆ ರಜೆಯನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ಕೆಲವು ಶಾಲೆಗಳಲ್ಲಿ ಕೇವಲ ಒಂದು ತಿಂಗಳು ರಜೆ ನೀಡಲಾಗುತ್ತಿದೆಯಷ್ಟೆ. ಇದು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.
ರಜೆಯ ಕಡಿತದಿಂದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮ ಬೀರುತ್ತದೆ. ನನ್ನ ಮಗ 12ನೇ ತರಗತಿಗೆ ಹೋಗುತ್ತಿದ್ದಾರೆ. ಅವರಿಗೆ ಕೇವಲ 12 ದಿನ ರಜೆ ನೀಡಲಾಗಿದೆ. ಮಕ್ಕಳಿಗೆ ಹೆಚ್ಚು ರಜೆ ನೀಡಿದರೆ ಅವರು ರಜೆಯ ಮಜಾದಲ್ಲಿ ಕಳೆದು ಹೋಗುತ್ತಾರೆ. ಅಧ್ಯಯನದ ಮೇಲೆ ಅವರಿಗೆ ಗಮನ ಬರುವುದಿಲ್ಲ ಎಂದು ಶಾಲೆಗಳಲ್ಲಿ ಹೇಳುತ್ತಾರೆ ಎಂದರು ಪೋಷಕಿ ದೀಪ್ತಿ.
ಇಂದಿನಿಂದ ಒಂದು ವರ್ಷದವರೆಗೆ ನಮ್ಮ ಮಗ ಬೇರೆಡೆಗೆ ಹೋದರೆ ಅವನನ್ನು ಕಾಣಲು ಕೈಗೆ ಸಿಗುವುದಿಲ್ಲ. ಮಕ್ಕಳಿಗೆ ನಿಗದಿತ ಸಮಯದವರೆಗೆ ನಿಗದಿತ ರಜೆ ಬೇಕು ಎಂದು ದೀಪ್ತಿಯವರ ಅಭಿಪ್ರಾಯ.
ನನ್ನ ಮಗನಿಗೆ ಮೇಯಿಂದ ಜೂನ್ ವರೆಗೆ ಕೇವಲ ಒಂದು ತಿಂಗಳು ರಜೆ ಸಿಗುತ್ತಿದೆಯಷ್ಟೆ. ವಾರ್ಷಿಕ ಪರೀಕ್ಷೆ ಮುಗಿದ ನಂತರ ಅವರನಿಗೆ ಕೇವಲ 10 ದಿನ ರಜೆ ಸಿಕ್ಕಿದೆಯಷ್ಟೆ. ಮೇಯಲ್ಲಿ ಹೊರಗೆ ಪ್ರವಾಸ ಹೋಗಬೇಕೆಂದಿದ್ದೆವು, ಆದರೆ ಜೂನ್ ನಲ್ಲಿ ಮತ್ತೆ ಪರೀಕ್ಷೆ ಇರಲಿದ್ದು ಅದಕ್ಕೆ ತಯಾರಿ ನಡೆಸಲು ಹೋಗುವಲ್ಲಿಗೆ ಪುಸ್ತಕ ಒಯ್ಯಬೇಕಿದೆ ಎಂದರು ಸುರೇಶ್ ಎ ಬಿ. ಅವರ ಪುತ್ರ 7ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಮಕ್ಕಳಿಗೆ ರಜೆ ಖಂಡಿತಾ ಬೇಕು, ವರ್ಷಪೂರ್ತಿ ಓದು, ಬರಹ, ಪರೀಕ್ಷೆ ಎಂದು ಕಳೆದರೆ ಮಕ್ಕಳಿಗೆ ಕಷ್ಟವಾಗುತ್ತದೆ. ಸಾಮಾಜಿಕ ಕೌಶಲ್ಯ ಸಾಧಿಸಲು ಮಕ್ಕಳಿಗೆ ರಜೆ ಇರಬೇಕು ಎನ್ನುತ್ತಾರೆ 8ನೇ ತರಗತಿ ವಿದ್ಯಾರ್ಥಿಯ ತಂದೆ ಎಸ್ ನರೇಂದ್ರ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕು ಸಮಾವೇಶ ಪ್ರಕಾರ, ಮಕ್ಕಳಿಗೆ ವಿಶ್ರಾಂತಿಗೆ ಸಮಯ ಸಿಗಬೇಕು. ಕರ್ನಾಟಕದಲ್ಲಿ ಶಾಲೆಯ ರಜೆಯ ಬಗ್ಗೆ ನೀತಿ ನಿಯಮಗಳಿಲ್ಲ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದೊರಳಗೆ ಕೇವಲ ಒಂದು ತಿಂಗಳು ರಜೆ ನೀಡಲಾಗುತ್ತಿದೆಯಷ್ಟೆ ಬೋರ್ಡ್ ಪರೀಕ್ಷೆ ಬಗ್ಗೆ ಮಕ್ಕಳಿಗೆ ಇದರಿಂದ ಪರೋಕ್ಷವಾಗಿ ಹೆದರಿಕೆ ಹುಟ್ಟಿಸಿದಂತಾಗುತ್ತದೆ ಎನ್ನುತ್ತಾರೆ ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕ ನಾಗಸಿಂಹ ರಾವ್.
ಶಿಕ್ಷಣ ಇಲಾಖೆ ಈ ವರ್ಷ ಏಪ್ರಿಲ್ 10ರಿಂದ ಮೇ 28ರವರೆಗೆ ರಜೆಗೆ ಶಿಫಾರಸು ಮಾಡಿದೆ. ಆದರೆ ಕೆಲವು ಶಾಲೆಗಳು 10-15 ದಿನಗಳ ರಜೆ ನೀಡಿದೆ. ಅದು ಮಕ್ಕಳ ಬೆಳವಣಿಗೆಗೆ ಒಳ್ಳೆಯದಲ್ಲ, 50 ದಿನಗಳ ರಜೆ ಮಕ್ಕಳಿಗೆ ಸಿಗಬೇಕು. ಬೇಸಿಗೆಯಲ್ಲಿ ಬೇಗನೆ ಶಾಲೆ ಆರಂಭವಾದರೆ ಮಕ್ಕಳಿಗೆ ಕಷ್ಟವಾಗಬಹುದು ಎನ್ನುತ್ತಾರೆ ಖಾಸಗಿ ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳ ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಡಿ.