ಕೊಪ್ಪಳ: ನಂಬಿಕೆಗೆ ಮತ್ತೊಂದು ಹೆಸರು ಶ್ವಾನ. ಅದರಲ್ಲೂ ಪೊಲೀಸ್ ಶ್ವಾನ ಎಂದರೆ ತುಂಬಾ ಶಿಸ್ತು. ಪೊಲೀಸರು ಒರಟರಂತೆ ಕಂಡರೂ ಮನಸ್ಸು ಮಲ್ಲಿಗೆಯಂತೆ.
ಇಷ್ಟೆಲ್ಲ ಪೀಠಿಕೆ ಯಾಕಂದ್ರೆ ಪೊಲೀಸ್ ಇಲಾಖೆಯಲ್ಲಿ ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಚೇತಕ್ ಹೆಸರಿನ ಡಾಬರ್ಮನ್ ನಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಇಂದು ಅದು ನೀಗಿದೆ. ಕೊಪ್ಪಳದ ಡಿಆರ್ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೇತಕ್ ಬಲು ಚುರುಕು ಮತ್ತು ಚಾಣಾಕ್ಷ. ಹಲವಾರು ಅಪರಾಧ ಪ್ರಕರಣಗಳನ್ನ ಭೇದಿಸುವಲ್ಲಿ ಚೇತಕ್ ಮಹತ್ವದ ಪಾತ್ರ ವಹಿಸಿತ್ತು.
ಚೇತಕ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೊಪ್ಪಳದ ಡಿಆರ್ ಬೆಟಾಲಿಯನ್ನಲ್ಲಿ ನೀರವ ಮೌನ. ಅಲ್ಲಿನ ಪೊಲೀಸರ ಕಣ್ಣಂಚಲಿ ಜಿನುಗಿದ ನೀರು...
ಚೇತಕ್ ಜೊತೆಗೆ ಬಾಂಬ್ ಪತ್ತೆ ಪ್ರಕರಣಗಳಲ್ಲಿ ಎಕ್ಸಪರ್ಟ್ ಆಗಿದ್ದ ಟೆರರ್ ಎಂಬ ಶ್ವಾನ ಚೇತಕ್ ಕಾಣದಾದಾಗಿನಿಂದ ಒದ್ದಾಡುತ್ತಿತ್ತು. ಚೇತಕ್ ಶವ ಬರುವ ಮುಂಚೆಯೇ ಪೊಲೀಸರ ಸಪ್ಪೆ ಮುಖ ನೋಡಿಯೇ ಅಳುವ ಧ್ವನಿಯಲ್ಲಿ ಟೆರರ್ ದುಃಖದಲ್ಲಿ ಭಾಗಿಯಾಗಿತ್ತು. ಚೇತಕ್ ಶವ ಬಂದೊಡನೆಯೇ ನೋಡಿದ ತಕ್ಷಣ ಪ್ರಾಣ ಬಿಟ್ಟ ಟೆರರ್ ಸಾವಿನಲ್ಲೂ ಚೇತಕ್ ಜೊತೆಯಾಗಿದ್ದು ಪೊಲೀಸರ ದುಃಖ ಇಮ್ಮಡಿಯಾಯಿತು.
ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಜಿ.ಸಂಗೀತಾ ಹಾಗೂ ಪೊಲೀಸ್ ಸಿಬ್ಬಂದಿ ಸಕಲ ಸರಕಾರಿ ಗೌರವಗಳೊಂದಿಗೆ ಶ್ವಾನಗಳ ಅಂತ್ಯ ಕ್ರಿಯೆ ನಡೆಸಿದರು.
-ಬಸವರಾಜ ಕರುಗಲ್, ಕೊಪ್ಪಳ.
Advertisement
Advertisement