ಉಡುಪಿ: ನ್ಯೂಮೋನಿಯಾದಿಂದಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳ ಆರೋಗ್ಯ ಸೋಮವಾರವೂ ಸ್ಥಿರವಾಗಿದ್ದು, ನಿಧಾನವಾಗಿ ಚಿಕಿತ್ಸಗೆ ಸ್ಪಂದಿಸುತ್ತಿದ್ದಾರೆ.
ಅವರ ಚಿಕಿತ್ಸೆಗೆ ಬೆಂಗಳೂರಿನ ಇಬ್ಬರು ತಜ್ಞ ವೈದ್ಯರು ಮಣಿಪಾಲಕ್ಕೆ ಆಗಮಿಸಿದ್ದಾರೆ. ಜೊತೆಗೆ ದಿಲ್ಲಿ ಏಮ್ಸ್ ಆಸ್ಪತ್ರೆ ಸಹಾಯವನ್ನೂ ಪಡೆಯಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮಣಿಪಾಲ ಆಸ್ಪತ್ರೆಗೆ ಕರೆ ಮಾಡಿ, ಚಿಕಿತ್ಸೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಕ್ಕೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಮುಂಜಾನೆ ತೀವ್ರ ನ್ಯುಮೋನಿಯಾದಿಂದಾಗಿ ಪ್ರಜ್ಞಾಹೀನರಾಗಿ ಆಸ್ಪತ್ರೆಗೆ ದಾಖಲಾಗಿರುವ ಶ್ರೀಗಳಿಗೆ ಸೋಮವಾರವೂ ಪ್ರಜ್ಞೆ ಬಂದಿಲ್ಲ. ಆದರೆ, ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ.
ನ್ಯೂಮೋನಿಯಾದ ಕಾರಣಕ್ಕೆ ಶ್ವಾಸಕೋಶದಲ್ಲಿ ಕಫ ತುಂಬಿದ್ದು, ಭಾನುವಾರ ರಾಂತ್ರಿ ಎಕ್ಸ್ ರೇ ಮತ್ತು ಸ್ಕ್ಯಾನಿಂಗ್ ಮಾಡಲಾಗಿದೆ. ಸೋಮವಾರ ರಾತ್ರಿ ಎಂಆರ್'ಐ ಸ್ಕ್ಯಾನಿಂಗ್ ನಡೆಸಿ, ದೆಹಲಿಯ ಏಮ್ಸ್ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ, ಮುಂದಿನ ಚಿಕಿತ್ಸೆಯ ಕ್ರಮದ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಕೇಂದ್ರ ಮಾಜಿ ಸಚಿವೆ ಸಾದ್ವಿ ಉಮಾಭಾರತಿ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಗುರು ಪೇಜಾವರ ಶ್ರೀಗಳ ದರ್ಶನ ಪಡೆದರು.
ಸುಮಾರು ಹೊತ್ತು ಆಸ್ಪತ್ರೆಯಲ್ಲಿ ಶ್ರೀಗಳಿದ್ದ ವಾರ್ಡಿನ ಹೊರಗೆ ಕಳೆದ ಅವರು ವೈದ್ಯರೊಂದಿಗೆ ಶ್ರೀಗಳ ಆರೋಗ್ಯದ ಬಗ್ಗೆ ಪೂರ್ಣ ಮಾಹಿತಿ ಪಡೆದರು. ಮತ್ತು ಚಿಕಿತ್ಸೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
Advertisement