ವಿಮಾನಗಳ ಪತನ
ರಾಜ್ಯ
ಏರೋ ಇಂಡಿಯಾ 2019: ವಿಮಾನಗಳ ಪತನ ತನಿಖೆಗೆ ಸಮಿತಿ ರಚನೆ: ವಾಯುಸೇನೆ ಮಾಹಿತಿ
ಏರೋ ಇಂಡಿಯಾ 2019 ಆರಂಭಕ್ಕೂ ಮುನ್ನಾದಿನವೇ ಸಂಭವಿಸಿರುವ ಸೂರ್ಯಕಿರಣ್ ಯುದ್ಧ ವಿಮಾನಗಳ ಪತನ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.
ಬೆಂಗಳೂರು: ಏರೋ ಇಂಡಿಯಾ 2019 ಆರಂಭಕ್ಕೂ ಮುನ್ನಾದಿನವೇ ಸಂಭವಿಸಿರುವ ಸೂರ್ಯಕಿರಣ್ ಯುದ್ಧ ವಿಮಾನಗಳ ಪತನ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ತಾಲೀಮು ನಿರತವಾಗಿದ್ದ ಸೂರ್ಯಕಿರಣ್ ಹಾಕ್ ಯುದ್ದ ವಿಮಾನಗಳು ಪತನವಾದ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವಾಯುಸೇನೆ, ಪ್ರಕರಣದ ತನಿಖೆಗೆ ಆದೇಶ ನೀಡಿರುವುದಾಗಿ ಹೇಳಿದೆ. ಅಂತೆಯೇ ಪ್ರಕರಣದಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದು, ಮೃತ ಪೈಲಟ್ ರನ್ನು ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಎಂದು ಗುರುತಿಸಲಾಗಿದೆ. ಅಂತೆಯೇ ಗಾಯಾಳು ಪೈಲಟ್ ಗಳನ್ನು ಸ್ಕ್ವಾಡ್ರನ್ ಲೀಡರ್ ವಿಜಯ್ ಶೇಳ್ಕೆ ಮತ್ತು ವಿಂಗ್ ಕಮಾಂಡರ್ ತೇಜೇಶ್ವರ್ ಸಿಂಗ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ವಿಮಾನಗಳ ಇಂಧನ ಟ್ಯಾಂಕ್ ಗಳು ಸ್ಫೋಟಗೊಂಡಿದ್ದು, ಘಟನಾ ಪ್ರದೇಶದ ಸಮೀಪದಲ್ಲಿದ್ದ ಕಟ್ಟಡಗಳಿಗೂ ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಸ್ಥಳೀಯರಿಗೆ ಗಾಯಗಳಾಗಿಲ್ಲ ಎಂದು ಸೇನೆ ಮಾಹಿತಿ ನೀಡಿದೆ.
ಸ್ಕಾಡ್ರನ್ ಲೀಡರ್ ವಿಜಯ್ ಶೇಳ್ಕೆ ನೇತೃತ್ವದಲ್ಲಿ ಸೂರ್ಯಕಿರಣ್ ಹಾಕ್ ಯುದ್ಧ ವಿಮಾನಗಳ ತಾಲೀಮು ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು, ಈ ದುರ್ಘಟನೆಯಲ್ಲಿ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ