ಮೈಸೂರು: ಅಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸಾರ್ವಜನಿಕರ ಎದುರೇ ಪತ್ನಿಗೆ ಹೊಡೆದು ಕೆಲ ವರ್ಷಗಳ ಹಿಂದೆ ಸುದ್ದಿಯಾಗಿದ್ದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಮತ್ತೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ.
ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಪತ್ನಿಯನ್ನು ಮನೆಯೊಳಗೆ ಸೇರಿಸುತ್ತಿಲ್ಲ ಎಂದು ಕುಮಾರಸ್ವಾಮಿಯವರ ಅತ್ತೆ ಆರೋಪಿಸಿದ್ದಾರೆ. ಅನೈತಿಕ ಸಂಬಂಧ ಹೊಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 2016ರಲ್ಲಿ ಸಾರ್ವಜನಿಕರ ಎದುರೇ ಕುಮಾರಸ್ವಾಮಿಯವರು ಪತ್ನಿಗೆ ಹೊಡೆದಿದ್ದರು.
ನಂತರ ವಿಚ್ಛೇದನಕ್ಕೆ ಕೋರಿ ಕುಮಾರಸ್ವಾಮಿಯವರ ಪತ್ನಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟವಾಗಿ ಒಂದು ತಿಂಗಳೊಳಗೆ ಪತ್ನಿಯನ್ನು ಮನೆಗೆ ಸೇರಿಸಬೇಕೆಂದು ತೀರ್ಪು ಕೊಟ್ಟಿತ್ತು. ಆದರೆ ತೀರ್ಪು ಪ್ರಕಟವಾಗಿ ಮೂರು ತಿಂಗಳು ಕಳೆದರೂ ಪತ್ನಿಯನ್ನು ಶಾಸಕ ಕುಮಾರಸ್ವಾಮಿ ಮನೆಗೆ ಸೇರಿಸಿಕೊಂಡಿಲ್ಲ.
ನಾವು ಪಕ್ಷದ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತು ಕೆ ಎಸ್ ಈಶ್ವರಪ್ಪ ಅವರಿಗೆ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕರ ಪತ್ನಿಯ ತಾಯಿ ಪ್ರೇಮಕುಮಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅದಕ್ಕಾಗಿ ಇನ್ನು ವಿಧಾನಸಭಾಧ್ಯಕ್ಷರ ಬಳಿಗೆ ತೆರಳಿ ದೂರು ನೀಡುತ್ತೇವೆ ಅಲ್ಲದೆ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.
Advertisement