ಬೆಂಗಳೂರು:ಸಿಟಿ ರೌಂಡ್ಸ್ ಕೈಗೊಂಡ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಇಂದು ಬೆಳಗ್ಗೆ ಕೆ. ಆರ್ . ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಮಾರುಕಟ್ಟೆಯಲ್ಲಿ ಕಸದ ರಾಶಿ ಕಂಡು ಗರಂ ಆದರು.ಉಪಮೇಯರ್ ಭದ್ರೇಗೌಡ ಅವರೊಂದಿಗೆ ಬೆಳಗ್ಗೆ ಮಾರುಕಟ್ಟೆಗೆ ಭೇಟಿ ನೀಡಿ ಕಸದ ರಾಶಿ ಕಂಡು ಸಿಟ್ಟಿಗೆದ್ದರು.
ನಾಲ್ಕು ಜೆಸಿಬಿಗಳನ್ನು ತಕ್ಷಣವೇ ಮಾರುಕಟ್ಟೆಗೆ ತರಿಸಿದ ಮೇಯರ್, ಅಲ್ಲಿ ಬಿದ್ದಿದ್ದ ಒಣಗಿದ ಹೂವುಗಳು,ಹಸಿ ಕಸ ಮತ್ತಿತರ ತ್ಯಾಜ್ಯವನ್ನು ಟ್ರಾಕ್ಟರ್ ಗಳಿಗೆ ತುಂಬಿಸಿ ಸಂಸ್ಕರಣಾ ಘಟಕಗಳಿಗೆ ರವಾನಿಸಿದರು. ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದ್ದಾರೆ.
ನಂತರ ಸಿರ್ಸಿ ಮೇಲ್ಸೇತುವೆ ಬಳಿ ಬಿದ್ದಿದ್ದ ಕಸದ ರಾಶಿಯನ್ನು ತೆರುವುಗೊಳಿಸಿದರಲ್ಲದೇ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸೇರಿ ಗೋಡೆಗಳಿಗೆ ಬಣ್ಣ ಬಳಿದರು.
ಸೇತುವೆಯ ಪಿಲ್ಲರ್ ಗಳಿಗೂ ತಾವೇ ಖುದ್ಧು ನಿಂತು ಬಣ್ಣ ಬಳಿದರಲ್ಲದೇ ಈ ಪ್ರದೇಶವನ್ನು ಚೊಕ್ಕಟ್ಟವಾಗಿಟ್ಟುಕೊಳ್ಳದಿದ್ದರೆ ಕ್ರಮ ಕೈಗೊಳ್ಳುವುದಾಗಿ ಮೇಯರ್ ಎಚ್ಚರಿಕೆ ನೀಡಿದರು.
Advertisement