ರಾಜ್ಯ
ನೀಲಮಣಿ ರಾಜು ನೇಮಕದಲ್ಲಿ ಸಿಎಂ ಸಮತೋಲಿತ ನಿಲುವು ತೆಗೆದುಕೊಂಡಿದ್ದಾರೆ: ರೆಡ್ಡಿ ಅರ್ಜಿ ತಿರಸ್ಕೃತ
ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರ ನೇಮಕಾತಿಯನ್ನು ಪ್ರಶ್ನಿಸಿ ಗೃಹ ...
ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರ ನೇಮಕಾತಿಯನ್ನು ಪ್ರಶ್ನಿಸಿ ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕ ಎಂ ಎನ್ ರೆಡ್ಡಿ ಸಲ್ಲಿಸಿದ್ದ ಮೂಲ ಅರ್ಜಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ(ಕ್ಯಾಟ್) ತಿರಸ್ಕರಿಸಿದೆ.
ಕರ್ನಾಟಕದ ಪೊಲೀಸ್ ಅಧಿಕಾರಿಗಳಲ್ಲಿ ರೆಡ್ಡಿ ಎರಡನೇ ಅತಿ ಹಿರಿಯ ಅಧಿಕಾರಿಯಾಗಿದ್ದು 1984ನೇ ಬ್ಯಾಚ್ ನವರು. ನೀಲಮಣಿ ಎನ್ ರಾಜು ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿಯಾಗಿ 2017ರ ನವೆಂಬರ್ ನಲ್ಲಿ ನೇಮಕಾತಿ ಮಾಡುವಾಗ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಅನುಸರಿಸಿಲ್ಲ, ಹುದ್ದೆಯಲ್ಲಿ ಹಿರಿತನದ ಸಾಲಿನಲ್ಲಿದ್ದ ಯುಪಿಎಸ್ ಸಿಯ ಹಿರಿಯ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಸಹ ಕಳುಹಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ನೀಲಮಣಿ ರಾಜು 1983ನೇ ಸಾಲಿನ ಐಪಿಎಸ್ ಅಧಿಕಾರಿ.
ಎಂ ಎನ್ ರೆಡ್ಡಿಯವರ ಅರ್ಜಿ ತಿರಸ್ಕರಿಸಿದ ನ್ಯಾಯಮಂಡಳಿ, ರಾಜ್ಯ ಸರ್ಕಾರ ರಚಿಸಿರುವ ಅತಿ ಪ್ರಭಾವ ಸಮಿತಿ ಡಿಜಿ ಮತ್ತು ಐಜಿಪಿ ನೇಮಕಾತಿಯಲ್ಲಿ ಉತ್ತಮ ಕೆಲಸ ಮಾಡಿದೆ. ಪಟ್ಟಿಯಲ್ಲಿದ್ದ ಎಲ್ಲಾ 6 ಮಂದಿ ಅಧಿಕಾರಿಗಳನ್ನು ಕೂಲಂಕಷವಾಗಿ ಹೋಲಿಕೆ ಮಾಡಿ ಅವರ ಸೇವಾ ದಾಖಲಾತಿಯನ್ನು ಪರೀಕ್ಷಿಸಿ ನಂತರ ಮುಖ್ಯಮಂತ್ರಿಗಳ ಮುಂದೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸೇವಾ ಹಿರಿತನ ಗಮನದಲ್ಲಿಟ್ಟುಕೊಂಡು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ನೇಮಕಾತಿಯಲ್ಲಿ ಮುಖ್ಯಮಂತ್ರಿ ಸಮತೋಲಿತ ನಿಲುವು ತೆಗೆದುಕೊಂಡಿದ್ದಾರೆ ಎಂದು ಹೇಳಿದೆ.