ಬೆಂಗಳೂರು: ಹಾಡಹಗಲೇ ರೌಡಿಶೀಟರ್ ಲಕ್ಷ್ಮಣ ಬರ್ಬರ ಹತ್ಯೆ
ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ರೌಡಿ ಶೀಟರ್ ಲಕ್ಷ್ಮಣ[(5)ನನ್ನು ಹಾಡಹಗಲೇ ಎದುರಾಳಿ ಗುಂಪು ಭೀಕರವಾಗಿ ಹತ್ಯೆ ಮಾಡಿದೆ.
ಇಸ್ಕಾನ್ ಸಮೀಪದ ರನೈಜಾನ್ ಅಪಾರ್ಟ್ ಮೆಂಟ್ ಬಳಿ ಕಾರಿನಲ್ಲಿ ಹೋಗುತ್ತಿದ್ದ ಲಕ್ಷ್ಮಣನನ್ನು ಐದರಿಂದ ಆರು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಲಾಂಗ್ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷದಿಂದ ಲಕ್ಷ್ಮಣನ ಹತ್ಯೆಯಾಗಿದೆ ಎಂದು ಸುಬ್ರಹ್ಮಣ್ಯ ಪುರ ಪೊಲೀಸರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ದಂಧೆಯಲ್ಲಿದ್ದ ಮೃತ ಲಕ್ಷ್ಮಣನನ್ನು ಸಿಸಿಬಿ ಪೊಲೀಸರು ಜೈಲಿಗೆ ಕಳಿಸಿದ್ದರು. ಎರಡು ದಿನಗಳ ಹಿಂದೆ ಲಕ್ಷ್ಮಣ ಜೈಲಿನಿಂದ ಹೊರಗೆ ಬಂದಿದ್ದ. ಲಕ್ಷ್ಮಣನ ಸಹೋದರ ರಾಮ ಸಹ ರೌಡಿ ಶೀಟರ್ ಆಗಿದ್ದು, ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಈ ಸಹೋದರರು ಭಾಗಿಯಾಗಿದ್ದರು.
ದಾಳಿಯಿಂದ ಗಾಯಗೊಂಡಿದ್ದ ಲಕ್ಷ್ಮಣನನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಈತ ಕೊನೆಯುಸಿರೆಳೆದಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈತನ ವಿರುದ್ಧ ಕೊಲೆ, ಕೊಲೆಯತ್ನ, ದಮ್ಕಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕೆಂಗೇರಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಲಕ್ಷ್ಮಣ್ ಇತ್ತೀಚೆಗೆ ಸಿಸಿಬಿ ಪೊಲೀಸರು ನಡೆಸಿದ್ದ ರೌಡಿ ಪರೇಡ್ಗೆ ಹಾಜರಾಗಿದ್ದನು. ಹಳೆ ವೈಷಮ್ಯದಿಂದ ಲಕ್ಷ್ಮಣ್ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಕೊಲೆ, ಕೊಲೆಯತ್ನ ಬೆದರಿಕೆ ದರೋಡೆ ಸುಲಿಗೆ ಸೇರಿದಂತೆ ಹಲವು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಲಕ್ಷ್ಮಣ ರಾಜಗೋಪಾಲನಗರ, ಜ್ಞಾನಭಾರತಿ, ಕೆಂಗೇರಿ ಮದ್ದೂರು ಸೇರಿ ಹಲವು ಪೊಲೀಸ್ ಠಾಣೆಗಳ ರೌಡಿಪಟ್ಟಿಯಲ್ಲಿದ್ದ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ