ಇದು ಟಿಎನ್ಐಇ ಇಂಪ್ಯಾಕ್ಟ್; ಕೊನೆಗೂ ಚಾಮರಾಜನಗರದ ಪುಟ್ಟಸ್ವಾಮಿ ಕುಟುಂಬಕ್ಕೆ ಬಹಿಷ್ಕಾರ ಅಂತ್ಯ!

ತಮ್ಮ ತಾಯಿ ಸಂಬಂಧಿಕರೊಂದಿಗೆ ಪಲಾಯನವಾದ ನಂತರ ದಶಕಗಳ ಕಾಲ ಸಮಾಜದಿಂದ ...
ಅಧಿಕಾರಿಗಳ ಸಭೆ
ಅಧಿಕಾರಿಗಳ ಸಭೆ
Updated on
ಮೈಸೂರು: ತಮ್ಮ ತಾಯಿ ಸಂಬಂಧಿಕರೊಂದಿಗೆ ಪಲಾಯನವಾದ ನಂತರ ದಶಕಗಳ ಕಾಲ ಸಮಾಜದಿಂದ ಬಹಿಷ್ಕಾರಕ್ಕೊಳಗಾಗಿದ್ದ ಚಾಮರಾಜನಗರ ಶಂಕರ ನಗರದ ಹಿಂದುಳಿದ ಮೇದಾರ್ ಸಮುದಾಯದ ಕುಟುಂಬದಲ್ಲಿ ಮತ್ತೆ ಬೆಳಕು ಮೂಡಿದೆ. ಬಹಿಷ್ಕಾರ ಅಂತ್ಯಗೊಂಡಿದ್ದು ಮಕ್ಕಳು ಸಂಭ್ರಮಿಸುವ ಸಮಯ ಬಂದಿದೆ.
ಇದಕ್ಕೆ ಕಾರಣ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ವರದಿ. ಸಮಾಜದಿಂದ ಬಹಿಷ್ಕಾರಕ್ಕೊಳಗಾಗಿದ್ದ ಕುಟುಂಬಸ್ಥರ ಪಾಡಿನ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತಾಲ್ಲೂಕಿನ ತಹಸೀಲ್ದಾರ್, ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿ ಮೇದಾರ್ ಕಾಲೊನಿಗೆ ಭೇಟಿ ನೀಡಿ ಸಮುದಾಯದವರ ಮನವೊಲಿಸುವಂತೆ ಹೇಳಿದ್ದಾರೆ.
ಕಾಲೊನಿ ನಿವಾಸಿ ಶಿವಮ್ಮ 30 ವರ್ಷಗಳ ಹಿಂದೆ ತನ್ನ ಕುಟುಂಬಸ್ಥರನ್ನು ತೊರೆದು ಬೇರೊಬ್ಬನ ಜೊತೆ ಓಡಿಹೋಗಿದ್ದಳು. ಅಂದಿನಿಂದ ಆಕೆಯ ಪತಿ ವೆಂಕಟರಮಣಪ್ಪ ಮತ್ತು ಮಕ್ಕಳಿಗೆ ಸಮುದಾಯದ ಮಂದಿ ಬಹಿಷ್ಕಾರ ಹಾಕಿದ್ದರು. ಅವರ ಜೊತೆ ಯಾರೂ ಮಾತನಾಡುತ್ತಿರಲಿಲ್ಲ. ಸಮುದಾಯದ ಯಾವುದೇ ಸಮಾರಂಭಗಳಿಗೆ ಸೇರಿಸುತ್ತಿರಲಿಲ್ಲ, ಕಾಲೊನಿಯ ದೇವಸ್ಥಾನದಲ್ಲಿ ಪೂಜೆ ಮಾಡಲು ಸಹ ಬಿಡುತ್ತಿರಲಿಲ್ಲ. ಕುಟುಂಬದವರು ತಮಗೆ ನ್ಯಾಯ ದೊರಕಿಸಿಕೊಡಲು ಕಂಡ ಕಂಡವರ ಸಹಾಯ ಕೋರಿದ್ದರು, ಆದರೆ ಪ್ರಯೋಜನವಾಗಿರಲಿಲ್ಲ.
ಕೆಲ ವರ್ಷಗಳ ನಂತರ ವೆಂಕಟರಮಣಪ್ಪ ತೀರಿಕೊಂಡ ಮೇಲೆ ದಂಪತಿಯ ಎರಡನೇ ಪುತ್ರ ನಾಗೇಂದ್ರ ಸಮುದಾಯದ ನಾಯಕರಿಗೆ 20 ಸಾವಿರ ರೂಪಾಯಿ ಕಟ್ಟಿ ತಮ್ಮ ಮೇಲಿರುವ ಬಹಿಷ್ಕಾರವನ್ನು ತೆಗೆದುಹಾಕುವಂತೆ ಬೇಡಿಕೊಂಡಿದ್ದರು. ಆದರೆ ಮತ್ತೊಬ್ಬ ಮಗ ಪುಟ್ಟಸ್ವಾಮಿ ಕಲ್ಲುಕುಟಿಗ ಕೆಲಸ ಮಾಡುತ್ತಿದ್ದು 40 ಸಾವಿರ ರೂಪಾಯಿ ಆತ ಪಾವತಿಸದ ಕಾರಣ ಬಹಿಷ್ಕಾರ ಕೊನೆಯಾಗಿರಲಿಲ್ಲ.
ಸಚಿವರ ಆದೇಶದ ನಂತರ ನಿನ್ನೆ ಅಧಿಕಾರಿಗಳು ಸಮುದಾಯದ ನಾಯಕರು ಮತ್ತು ನಿವಾಸಿಗಳ ಜೊತೆ ಕಾಲೊನಿಯ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಸಭೆ ನಡೆಸಿ ಕುಟುಂಬಕ್ಕೆ ಬಹಿಷ್ಕಾರ ಹಾಕಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪುಟ್ಟಸ್ವಾಮಿ ಕುಟುಂಬಕ್ಕೆ ಪ್ರವೇಶಿಸಲು ಬಿಡದಿದ್ದರೆ ಸರ್ಕಾರ ದೇವಸ್ಥಾನವನ್ನು ವಶಕ್ಕೆ ತೆಗೆದುಕೊಳ್ಳುತ್ತದೆ ಎಂದು ಸಹ ಎಚ್ಚರಿಕೆ ನೀಡಲಾಗಿದೆ.
ಸಮುದಾಯದ ಮುಖಂಡರು ಪ್ರಕರಣವನ್ನು ಇತ್ಯರ್ಥಪಡಿಸಲು 10 ದಿನಗಳ ಸಮಯಾವಕಾಶ ಕೇಳಿದ್ದು ಪುಟ್ಟಸ್ವಾಮಿ ಕುಟುಂಬಕ್ಕೆ ಮುಂದಿನ ಶುಕ್ರವಾರ ಪೂಜೆ ಸಲ್ಲಿಸಲು ಅವಕಾಶ ನೀಡಿ ಸಮುದಾಯದ ಸಭಾಂಗಣವನ್ನು ಬಳಸಿಕೊಳ್ಳಲು ಸಹ ಅವಕಾಶ ನೀಡಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com