ಬೆಂಗಳೂರು: ಬೀದಿ ನಾಯಿಗಳಿಂದ ದಾಳಿಗೊಳಗಾಗಬೇಕಿದ್ದ ಮರಿ ಜಿಂಕೆಯನ್ನು ಕಾಪಾಡಿದ ಅರಣ್ಯ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚುಗೆಗೆ ಪಾತ್ರವಾಗಿದೆ.
5 ತಿಂಗಳ ಜಿಂಕೆ ಮರಿ ಕನಕಪುರ ರಸ್ತೆಯಲ್ಲಿ ಕಾಣಿಸಿಕೊಂಡಿತ್ತು. ಅದನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗುತ್ತಿದ್ದದ್ದನ್ನು ಕಂಡಒ ಅರಣ್ಯ ಸಿಬ್ಬಂದಿ ರಾಜಣ್ಣ, ಬೀದಿ ನಾಯಿಗಳನ್ನು ಓಡಿಸಿ ಜಿಂಕೆ ಮರಿಯನ್ನು ಹಿಡಿದಿದ್ದಾರೆ.
"ಒಂದೆಡೆ ಬೀದಿ ನಾಯಿಗಳ ದಾಳಿಯ ಭಯ ಇದ್ದರೆ, ಮತ್ತೊಂದೆಡೆ ಜಿಂಕೆ ಮರಿ ವಾಹನ ಸಂಚಾರ ಹೆಚ್ಚಿರುವ ರಸ್ತೆಗೆ ಓಡುತ್ತಿತ್ತು. ಇದರಿಂದಾಗಿ ಮತ್ತಷ್ಟು ಭಯಗೊಂಡಿದ್ದೆ. ಕೊನೆಗೆ ಬೀದಿ ನಾಯಿಗಳನ್ನು ಓಡಿಸಿದೆ" ಎಂದು ರಾಜಣ್ಣ ಹೇಳಿದ್ದಾರೆ.
ಇದೇ ವೇಳೆಗೆ ಸ್ಥಳೀಯರು ಬಿಬಿಎಂಪಿ ಯ ಪ್ರಾಣಿ ರಕ್ಷಣ ವಿಭಾಗದ ಪ್ರಸನ್ನ ಕುಮಾರ್ ಗೆ ಕರೆ ಮಾಡಿದ್ದರು, ಪ್ರಸನ್ನ ಕುಮಾರ್ ಸ್ಥಳಕ್ಕೆ ಧಾವಿಸುವ ಮುನ್ನವೇ ರಾಜಣ್ಣ ಜಿಂಕೆ ಮರಿಯನ್ನು ರಕ್ಷಿಸಿದ್ದರು.
ಜಿಂಕೆ ಮರಿಯ ರಕ್ಷಣೆ ನಂತರ ಅದನ್ನು ಕಾಡಿನ ಮಧ್ಯ ಭಾಗಕ್ಕೆ ಬಿಡಲಾಗಿದೆ. ತುರಹಳ್ಳಿ ಕಾಡಿನಲ್ಲಿ ಆಗಾಗ್ಗೇ ಕಾಣಿಸಿಕೊಳ್ಳುವ ಬೆಂಕಿ ಹಾಗೂ ಬಿಬಿಎಂಪಿಯಿಂದ ಕೊಂಡೊಯ್ದು ಬಿಡಲಾಗುವ ಬೀದಿ ನಾಯಿಗಳ ಹಾವಳಿಯಿಂದಾಗಿ ಕಾಡಿನಲ್ಲಿರುವ ಕೆಲವು ಪ್ರಾಣಿಗಳಿಗೆ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ.
2009-2018 ರಲ್ಲಿಯೂ ಸಹ ಇದೇ ಮಾದರಿಯಲ್ಲಿ ಜಿಂಕೆಯ ಮೇಲೆ ಇದೇ ಭಾಗದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದವು.
ಕಳೆದ ವರ್ಷವೂ ನಾಯಿಗಳು ಜಿಂಕೆ ಮರಿ ಮೇಲೆ ದಾಳಿ ನಡೆಸಿದ್ದವು. ಆದರೆ ನಾಯಿಗಳಿಗೆ ಹಿಂಸೆ ಮಾಡಿದರೆ ಅದು ಪ್ರಾಣಿಗಳ ಹಕ್ಕುಗಳಿಗೆ ವಿರುದ್ಧವಾಗಿರುತ್ತದೆ. ಬಿಬಿಎಂಪಿ ಸಹ ಬೀದಿ ನಾಯಿಗಳನ್ನು ಅರಣ್ಯ ಭಾಗಕ್ಕೆ ತೆಗೆದುಕೊಂಡುಹೋಗಿ ಬಿಡುತ್ತವೆ. ಜಿಂಕೆಗಳ ಸುರಕ್ಷತೆ ಬಗ್ಗೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಅರಣ್ಯ ಅಧಿಕಾರಿ ಶ್ರೀಧರ್ ತಿಳಿಸಿದ್ದಾರೆ.