ಜಿಂದಾಲ್ ಗೆ ಜಮೀನು ಪರಭಾರೆ ವಿರುದ್ಧ ಬಿಜೆಪಿ ಪ್ರತಿಭಟನೆ: ಬಿ ಎಸ್ ಯಡಿಯೂರಪ್ಪ

ಸರ್ಕಾರದ ಮೂರು ಸಾವಿರ ಎಕರೆ ಜಮೀನನ್ನು ಜಿಂದಾಲ್ ಗೆ ಪರಭಾರೆ ...
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಸರ್ಕಾರದ  ಮೂರು ಸಾವಿರ ಎಕರೆ  ಜಮೀನನ್ನು ಜಿಂದಾಲ್ ಗೆ ಪರಭಾರೆ  ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಈ ಸಂಬಂಧ  ಬರುವ  5 ರಂದು ಸಂಸದರು ಮತ್ತು ಶಾಸಕರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಹೋರಾಟದ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದು ಅವರು ಸುದ್ದಿಗಾರರರಿಗೆ ತಿಳಿಸಿದರು.

ಕುಮಾರಸ್ವಾಮಿಯವರ ಸರ್ಕಾರ, ಪತ್ರಕರ್ತ ವಿಶ್ವೇಶ್ವರ ಭಟ್ ಮೇಲೆ ಪ್ರಕರಣ ದಾಖಲಿಸುವ ಮೂಲಕ ಸೇಡಿನ ರಾಜಕೀಯಕ್ಕೆ ಮುಂದಾಗಿ ಮಾಧ್ಯಮ ಹತ್ತಿಕ್ಕುವ ಪ್ರಯತ್ನ  ಮಾಡುತ್ತಿದ್ದು, ಈ ನಡವಳಿಕೆಯನ್ನು ಖಂಡಿಸುವುದಾಗಿ ಹೇಳಿದರು.

ರಾಜ್ಯದಲ್ಲಿ   ಅಪ್ಪ- ಮಕ್ಕಳ  ಸರ್ಕಾರ ಸತ್ತು ಹೋಗಿದೆ. ಬರ ಪರಿಸ್ಥಿತಿ ಇದ್ದರೂ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಜೆಡಿಎಸ್ ಅಪ್ಪ ಮಕ್ಕಳ‌ ಪಾರ್ಟಿಯಾಗಿದ್ದು  ಕಾಂಗ್ರೆಸ್ ಪಕ್ಷವನ್ನು  ಸರ್ವನಾಶ ಮಾಡಿದೆ ಎಂದರು.

ಹೇಗಾದರೂ ಮಾಡಿ ಅಧಿಕಾರದಲ್ಲಿ ಮುಂದುವರಿಯುವ ಷಡ್ಯಂತ್ರ ಮಾಡಿದ್ದಾರೆ, 22ಸ್ಥಾನ ಗೆಲ್ಲುವುದು  ನಮ್ಮ ಗುರಿ ಎಂದು ಹೇಳಿದ್ದೆ, ಆದರೆ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಜನರು ನೀಡಿ ಬಿಜೆಪಿಗೆ  ಆಶೀರ್ವಾದ ಮಾಡಿದ್ದಾರೆ, ಅದನ್ನು‌ ಪ್ರಧಾನಿ‌ ಮೋದಿಯವರೇ ಪ್ರಶಂಸಿಸಿದ್ದಾರೆ  ಎಂದು ಯಡಿಯೂರಪ್ಪ  ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಅದ್ಭುತ ಜಯ ಸಾಧಿಸಿದ್ದು, ಅದರಲ್ಲಿ 170ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮುನ್ನಡೆ ಪಡೆದಿದೆ. ಮೈತ್ರಿ ಸರ್ಕಾರ ಆಂತರಿಕ ಗೊಂದಲದಿಂದ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಮಧ್ಯಂತರ ಚುನಾವಣೆಗೆ ಹೋಗುವುದಾದರೆ ಪಕ್ಷ ಅದನ್ನು ಸ್ವಾಗತಿಸುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com