ಖಡಕ್ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ರಾಜಿನಾಮೆ ನೀಡಿದ್ದೇಕೆ..? ಅವರ ಪತ್ರದಲ್ಲಿ ಏನಿದೆ..?

ಖಡಕ್ ಪೊಲೀಸ್ ಅಧಿಕಾರಿಯೆಂದೇ ಕರ್ನಾಟಕದಾದ್ಯಂತ ಜನಪ್ರಿಯರಾಗಿರುವ ಬೆಂಗಳೂರು ದಕ್ಷಿಣ ...
ಬೆಂಗಳೂರು ಡಿಸಿಪಿ ಅಣ್ಣಾಮಲೈ
ಬೆಂಗಳೂರು ಡಿಸಿಪಿ ಅಣ್ಣಾಮಲೈ
Updated on
ಬೆಂಗಳೂರು: ಖಡಕ್ ಪೊಲೀಸ್ ಅಧಿಕಾರಿಯೆಂದೇ ಕರ್ನಾಟಕದಾದ್ಯಂತ ಜನಪ್ರಿಯರಾಗಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ತಮಿಳುನಾಡು ಮೂಲದ ಕೆ ಅಣ್ಣಾಮಲೈ (35ವ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ದಿಢೀರನೆ ಅವರು ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದೆ. ಅವರ ಅಭಿಮಾನಿಗಳಲ್ಲಿ ಬೇಸರವನ್ನು ಕೂಡ ತರಿಸಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇನ್ನೂ 10 ವರ್ಷ ಪೂರೈಸುತ್ತಿರುವಾಗಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ಈ ನಿರ್ಧಾರ ಕೈಗೊಂಡಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಡಿಸಿಪಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಸಂದರ್ಭದಲ್ಲಿ ಅವರು ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದು ಹೀಗೆ:
"ಕಳೆದ 2 ದಿನಗಳಿಂದಲೂ ನನ್ನ ರಾಜೀನಾಮೆ ಕುರಿತಾಗಿ ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ. ಅದರ ಬಗ್ಗೆ ನಾನೊಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ. ಈ ದಿನ ಅಂದರೆ 28ನೇ ಮೇ 2019 ನಾನು ಭಾರತೀಯ ಪೊಲೀಸ್ ಸೇವೆಗೆ ನನ್ನ ರಾಜೀನಾಮೆ ನೀಡಿದ್ದೇನೆ. ಅಂಗೀಕಾರ, ಪತ್ರ ವ್ಯವಹಾರ ಎಲ್ಲಾ ಪ್ರಕ್ರಿಯೆಗಳಿಗೂ ಕೆಲ ಕಾಲ ಸಮಯ ತೆಗೆದುಕೊಳ್ಳುತ್ತದೆ.
ಕಳೆದ ಒಂದು ವರ್ಷದಿಂದ ನಾನು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದೆ. ಐಪಿಎಎಸ್​​ಗೆ ಆಯ್ಕೆಯಾಗಿ 9 ವರ್ಷಗಳೇ ಆಗಿವೆ. ನಾನು ಆ 9 ವರ್ಷಗಳ ಪ್ರತಿಯೊಂದು ಕ್ಷಣದಲ್ಲೂ ಖಾಕಿ ಜೊತೆಯಲ್ಲೇ ಬದುಕಿದೆ. ಪೊಲೀಸ್ ಕೆಲಸಕ್ಕಿಂತ ಸರಿ ಸಮನಾದ ಮತ್ತೊಂದು ಕೆಲಸ ಇಲ್ಲ ಎಂದು ನಂಬಿದವನು ನಾನು. ಇದನ್ನ ನನ್ನ ಎಷ್ಟೋ ಮಂದಿ ಜೊತೆಗಾರರೊಂದಿಗೂ ಹಂಚಿಕೊಂಡಿದ್ದೇನೆ.
ನನ್ನ ಪ್ರಕಾರ ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಕೆಲಸ. ಜೊತೆಗೆ ಹೆಚ್ಚು ಜವಾಬ್ಧಾರಿಯುತ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಇದರ ಜೊತೆಗೆ ಸಾಕಷ್ಟು ವೈಯುಕ್ತಿಕ ಸಭೆ, ಸಮಾರಂಭ, ಕುಟುಂಬದ ಕೆಲಸ ಕಾರ್ಯಗಳನ್ನೂ ಕಳೆದುಕೊಂಡಿದ್ದೇನೆ. ಕಳೆದ 5 ವರ್ಷಗಳಲ್ಲಿ ಕೇವಲ 21 ದಿನ ರಜೆ ತೆಗೆದುಕೊಂಡಿದ್ದೇನೆ. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯೋಕೆ ಸಹಕರಿಸಿದ ಹಲವರಿಗೆ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನಾನು ಬಹಳ ಹೆಮ್ಮೆ ಮತ್ತು ಖುಷಿಯಿಂದಲೇ ಹುದ್ದೆ ತೊರೆಯುತ್ತಿದ್ದೇನೆ ಎಂದಿದ್ದಾರೆ.
ಅಣ್ಮಾಮಲೈ ಜೊತೆ ಕೆಲಸ ಮಾಡಿದ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ ಅಣ್ಣಾಮಲೈ ರಾಜಕೀಯಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಇದುವರೆಗೆ ಪೊಲೀಸ್ ವೃತ್ತಿಯಲ್ಲಿ ಗಳಿಸಿದ ಅನುಭವಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಅವರು ಮುಂದಾಗಿದ್ದಾರೆ ಎಂದು.
ಈ ಸಂದರ್ಭದಲ್ಲಿ ಅಮ್ಮಾಮಲೈಯವರು ಭಾವನಾತ್ಮಕ ಪತ್ರವೊಂದನ್ನು ಕೂಡ ಬರೆದಿದ್ದಾರೆ, ಅದರ ಸಾರಾಂಶ ಹೀಗಿದೆ: ''ಕಳೆದ ವರ್ಷ ನಾನು ಮಾನಸ ಸರೋವರದ ಕೈಲಾಸ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಆ ಯಾತ್ರೆ ನನ್ನ ಕಣ್ಣು ತೆರೆಸಿತು. ನನ್ನ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಸಾವು ನನ್ನನ್ನ ತೀವ್ರವಾಗಿ ಭಾಧಿಸಿತು. ಅಲ್ಲದೆ ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನ ನಾನೇ ಓದಿಕೊಳ್ಳಲು ವೇದಿಕೆ ಸೃಷ್ಟಿಸಿತು.
ಜನ ಎಲ್ಲಾ ಮುಂದೇನು ಅಂತ ಕೇಳ್ತಿದ್ದಾರೆ. ನಾನು ಅಷ್ಟು ದೊಡ್ಡ ಯಾವುದೋ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿಲ್ಲ. ನನಗೆ ಸ್ವಲ್ಪ ಸಮಯದ ಅವಕಾಶವಿದೆ. ನನ್ನ ಜೀವನದ ಅತಿ ಚಿಕ್ಕ ಚಿಕ್ಕ ಘಟನೆಗಳು, ಚಿಕ್ಕ ಚಿಕ್ಕ ವಿಷಯಗಳನ್ನ ಸವಿಯಲು ನನಗೆ ಸಮಯ ಬೇಕಿದೆ. ನನ್ನ ಮಗನೊಟ್ಟಿಗೆ ಸಮಯ ಕಳೆಯಬೇಕಿದೆ. ಅವನ ಪ್ರತಿಯೊಂದು ಬೆಳವಣಿಗೆಗೂ ತಂದೆಯಾಗಿ ನಾನು ಸಮಯ ಕೊಡಬೇಕಿದೆ. ನಾನು ನನ್ನ ಕುಟುಂಬದತ್ತ ಹೊರಳಬೇಕಿದೆ. ಜೀವನ ಇನ್ನೂ ತುಂಬಾ ಇದೆ.
ವೃತ್ತಿ ಬಾಂಧವರನ್ನು ನಾನು ತುಂಬಾನೇ ಮಿಸ್ ಮಾಡ್ಕೊಂಡಿದ್ದೀನಿ. ಜೊತೆಗೆ ನನ್ನನ್ನ ಇಷ್ಟಪಟ್ಟ ಜನರನ್ನ ಕೂಡ. ಪ್ರಮುಖವಾಗಿ ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಪ್ರಮುಖರನ್ನ. ನಾನು ನಿಮ್ಮೆಲ್ಲರ ಪ್ರೀತಿ ಮತ್ತು ನನ್ನ ಹಿರಿಯ ಅಧಿಕಾರಿಗಳ ಮಾರ್ಗದರ್ಶನಗಳನ್ನ ಮಿಸ್ ಮಾಡ್ಕೊತಿದೀನಿ. ನನ್ನೆಲ್ಲಾ ಕಾನ್ಸ್ಟೆಬಲ್ಗಳು, ಕಿರಿಯ ದರ್ಜೆಯ ಅಧಿಕಾರಿಗಳ ಶ್ರೇಯೋಭಿವೃದ್ಧಿಗೆ ನಾನು ಸಾಕಷ್ಟು ದುಡಿದಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಅವರ ವೃತ್ತಿ ಬದುಕು ಮತ್ತು ದೈನಂದಿನ ಜೀವನ ಇನ್ನೂ ಹೆಚ್ಚಿನ ಅವಶ್ಯಕವಾಗಿ ಬೆಳಗಬೇಕಿದೆ. ನನ್ನಿಂದ ಯಾರಿಗಾದ್ರೂ ಯಾವುದೇ ಸಮಯದಲ್ಲಾದರೂ ಮನಸ್ಸಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ. ನಿಮ್ಮೆಲ್ಲರನ್ನೂ ಮುಖ್ಯವಾಗಿ ನಿಮ್ಮ ಪ್ರೀತಿ- ವಿಶ್ವಾಸಗಳನ್ನು ನಾನು ಖಂಡಿತವಾಗಿಯೂ ಮಿಸ್ ಮಾಡ್ಕೋತಿದ್ದೇನೆ," ಎಂದು ಅಣ್ಣಮಲೈ ಪತ್ರದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com