ನವದೆಹಲಿ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಕ್ರಿಯೆ ನ.11ಕ್ಕೆ ಆರಂಭಗೊಳ್ಳಲಿದ್ದು, ಈ ನಡುವಲ್ಲೇ ಉಪ ಚುನಾವಣೆ ಮುಂದೂಡುವಂತೆ ಅನರ್ಹ ಶಾಸಕರು ಮಾಡಿರುವ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿಯವರು ತೀರ್ಪು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಶನಿವಾರದಿಂದ ನ.12ವರೆಗೆ ಕೋರ್ಟಿಗೆ ರಜೆ ಇರುವ ಕಾರಣ ಉಪ ಚುನಾವಣೆ ಮುಂದೂಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದರು.
ಈ ಮನವಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಮಣ್ ನೇತೃತ್ವದ ತ್ರಿಸದಸ್ಯ ಪೀಠ ತಿರಸ್ಕರಿಸಿದ್ದು, ಉಪ ಚುನಾವಣೆಯನ್ನು ಮುಂದೂಡಲು ನಿರ್ದೇಶನ ನೀಡುವುದಿಲ್ಲ ಎಂದು ತಿಳಿಸಿದೆ.
ನವೆಂಬರ್ 11 ರಿಂದ ಉಪ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹೀಗಾಗಿ ಉಪಚುನಾವಣೆಯನ್ನು ಮುಂದೂಡಬೇಕು. ಇದಕ್ಕಾಗಿ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಬೇಕೆಂದು ರೋಹ್ಟಗಿ ಮನವಿ ಮಾಡಿಕೊಂಡರು. ಆದರೆ, ಉಪಚುನಾವಣೆ ಮುಂದೂಡಿಕೆ ಕುರಿತ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಪಟ್ಟಿ ಮಾಡಲು ಒಪ್ಪಿದ ನ್ಯಾಯಮೂರ್ತಿಗಳು, ಆಯೋಗಕ್ಕೆ ಚುನಾವಣೆ ಮುಂದೂಡುವಂತೆ ನಿರ್ದೇಶಿಸುವುದಿಲ್ಲ ಎಂದು ತಿಳಿಸಿದ್ದಾರೆ.
Advertisement