ಮೈಸೂರು ದಸರಾ 2019: ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ
ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಈ ಬಾರಿ ಚಾಮರಾಜನಗರದ ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ ಎಂಬ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಚಾಮರಾಜನಗರ ಜಿಲ್ಲೆಯ “ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ” ವಿಷಯ ಆಧಾರಿತ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯ “ಕದಂಬ/ಬನವಾಸಿ” ವಿಷಯ ಆಧಾರಿತ ಸ್ತಬ್ಧಚಿತ್ರಕ್ಕೆ ದ್ವೀತಿಯ ಹಾಗೂ ತುಮಕೂರು ಜಿಲ್ಲೆಯ “ನಡೆದಾಡುವ ದೇವರು” ವಿಷಯ ಆಧಾರಿತ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭಿಸಿದೆ.
ಇನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಸರ್ಕಾರದ ಸೌಲಭ್ಯಗಳ ಮಾಹಿತಿ” ವಿಷಯ ಆಧಾರಿತ ಸ್ತಬ್ಧಚಿತ್ರ, ಶಿವಮೊಗ್ಗ ಜಿಲ್ಲೆಯ “ಫಿಟ್ ಇಂಡಿಯಾ” ಹಾಗೂ ಚಿಕ್ಕಮಗಳೂರು ಜಿಲ್ಲೆಯ “ಶಿಶಿಲ ಬೆಟ್ಟ” ವಿಷಯ ಆಧಾರಿತ ಸ್ತಬ್ಧಚಿತ್ರಗಳು ಸಮಾಧಾನಕರ ಬಹುಮಾನವನ್ನು ಹಂಚಿಕೊಂಡಿದೆ.
ನಿನ್ನೆ ನಡೆದ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ 30 ಜಿಲ್ಲೆಗಳ ಸ್ಥಬ್ಧಚಿತ್ರ ಸೇರಿದಂತೆ 38 ಸ್ತಬ್ಧ ಚಿತ್ರಗಳು ಭಾಗಿಯಾಗಿದ್ದವು.

