ಬೆಂಗಳೂರು: ಮೊಬೈಲ್ ನಲ್ಲಿ ಮಾತನಾಡಲು ಸ್ವಾತಂತ್ರ್ಯ ಇರಲಿಲ್ಲ ಎಂದು ಹೇಳಿ ಮಗಳೇ ತನ್ನ ತಂದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆಗೆ ಸಾಕ್ಷಿಯಾಗಿದ್ದ ಬೆಂಗಳೂರು, ಇದೀಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ತನ್ನ ತಾಯಿಗೆ ಕಿಡ್ನಿ ದಾನ ಮಾಡಲು 26 ವರ್ಷದ ಯುವತಿಯೊಬ್ಬರು ನಿಗದಿಯಾಗಿದ್ದ ಎಂಗೇಜ್ ಮೆಂಟ್ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಘಟನೆಗೂ ಸಾಕ್ಷಿಯಾಗಿದೆ.
ವರನ ವಿರೋಧದ ನಡುವೆಯೂ ಕಿಡ್ನಿ ತೊಂದರೆಯಿಂದ ನರಳುತ್ತಿದ್ದ ತಾಯಿ ಶಿಖಾ ರಾಣಿಗೆ 26 ವರ್ಷದ ಸೊರ್ಬೊಜಯ ಸಿಥಿ ದೇಬ್ ತನ್ನದೊಂದು ಕಿಡ್ನಿ ದಾನ ಮಾಡುವ ಮೂಲಕ ತಾಯಿಯ ಪ್ರಾಣ ಉಳಿಸಿದ್ದಾರೆ.
ತಾಯಿ ಇಲ್ಲದೆ ತನ್ನ ಜೀವನವೇ ಇಲ್ಲ. ಕಿಡ್ನಿ ದಾನಕ್ಕೆ ಅಮ್ಮ ಒಪ್ಪಿರಲಿಲ್ಲ. ಅವರನ್ನು ಒಪ್ಪಿಸಲು ಒಂದು ವರ್ಷವೇ ಬೇಕಾಯಿತು ಎಂದು ಸದ್ಯ ಹಳೆಯ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ತಾಯಿ ಜೊತೆಗೆ ಚೇತರಿಸಿಕೊಳ್ಳುತ್ತಿರುವ ದೇಬ್ ತಿಳಿಸಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಸಾಯುತ್ತೇನೆ ಎಂದು ಅಮ್ಮ ಯೋಚಿಸಿ, ತನ್ನ ಎಂಗೇಜ್ ಮೆಂಟ್ ಮಾಡಲು ನಿರ್ಧರಿಸಿದ್ದರು. ಆದರೆ, ಅವರು ಒಪ್ಪಿದ ನಂತರ, ನನ್ನ ನಿರ್ಧಾರವನ್ನು ವರನ ಕಡೆಯವರಿಗೆ ಹೇಳಿದೆ. ಆದರೆ, ಅವರು ಒಪ್ಪದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧಾರ ಮಾಡಲಾಯಿತು. ತನ್ನಗೆ ಅಮ್ಮನೇ ಮುಖ್ಯ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಅವಿವಾಹಿತ ಯುವತಿಯ ಕಿಡ್ನಿ ದಾನಕ್ಕೆ ಒಪ್ಪುವುದಿಲ್ಲ. ಆದರೂ, ಅವರ ಆರೋಗ್ಯದ ಪರಿಸ್ಥಿತಿ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ದೇಬ್ ಜೊತೆಗೆ ಹಲವು ಬಾರಿ ಸಮಾಲೋಚಿಸಿದ ನಂತರ ಕಿಡ್ನಿ ದಾನ ಮಾಡಲು ಒಪ್ಪಿಕೊಳ್ಳಲಾಯಿತು. ಅಂತಹ ಮಗಳನ್ನು ಪಡೆದ ಪೋಷಕರನ್ನು ಅಭಿನಂದಿಸುವುದಾಗಿ ನೆಪ್ರೋಲಾಜಿಸ್ಟ್ ಡಾ. ಶಂಕರನ್ ಸುಂದರ್ ಹೇಳಿದ್ದಾರೆ.
ಶಿಖಾ ರಾಣಿಗೆ 2015ರಲ್ಲಿ ಕಿಡ್ನಿ ಕಾಯಿಲೆ ಕಂಡುಬಂದಿತ್ತು. ನಂತರ ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿದಾಗ ಕಿಡ್ನಿ ಬದಲಾಯಿಸಬೇಕಾಗಿ ವೈದ್ಯರು ಹೇಳಿದ್ದರು. ಆದಾಗ್ಯೂ, ಹಣಕಾಸಿನ ತೊಂದರೆಯಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ದೇಬ್ ತನ್ನ ಕಿಡ್ನಿಯನ್ನೇ ದಾನ ಮಾಡಲು ನಿರ್ಧರಿಸಿದ್ದರು.ಈಗ ತಾಯಿ ಹಾಗೂ ಮಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಸದ್ಯದಲ್ಲೇ ಬಾಗ್ಲಾದೇಶಕ್ಕೆ ತೆರಳಲಿದ್ದಾರೆ.
Advertisement