ಬೆಂಗಳೂರು: ಬ್ಯಾಂಕ್ ಖಾತೆ ವಿವರಗಳು ಮತ್ತು ಒಂದು ಬಾರಿಯ ಪಾಸ್ವರ್ಡ್ (ಒಟಿಪಿ) ಸಹ ಹಂಚಿಕೊಳ್ಳದೆ 64 ವರ್ಷದ ನಿವೃತ್ತ ವ್ಯಕ್ತಿಯೊಬ್ಬ ಆನ್ಲೈನ್ ವಂಚನೆಗೆ 90,000 ರೂ. ಕಳೆದುಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ.
ಬನಶಂಕರಿ 3 ನೇ ಹಂತದ ನಿವಾಸಿ ಟಿ.ಎಂ.ಶಿವರಾಮ್ ಈ ರೀತಿ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು ಈ ಕುರಿತು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ವಿವರ
ನವೆಂಬರ್ 12 ರಂದು ಶಿವರಾಮ್ ದೂರು ಸಲ್ಲಿಸಿದ್ದು ಆ ದೂರಿನ ಪ್ರಕಾರ ಅವರು ತಮ್ಮ ಕ್ರೆಡಿಟ್ ಕಾರ್ಡ್ನಿಂದ ರೆಡ್ಬಸ್ ಮತ್ತು ಬಿಗ್ಟ್ರೀ ಹೆಸರಲ್ಲಿ 90,000 ರೂ.ಗಳಷ್ಟು ಕಡಿತದ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಶಿವರಾಮ್ ತಕ್ಷಣ ಬ್ಯಾಂಕಿಗೆ ಕರೆ ಮಾಡಿ ತನ್ನ ಕಾರ್ಡ್ ಅನ್ನು ನಿರ್ಬಂಧಿಸಿದ್ದಾರೆ (ಬ್ಲಾಕ್ ಮಾಡಿಸಿಕೊಂಡಿದ್ದಾರೆ) ಆ ಬಳಿಕ ಅವರು ಬ್ಯಾಂಕ್ ಗೆ ತೆರಳಿ ಕಾರ್ಡ್ ನಿಂದ ಹಣ ಹೇಗೆ ಕಳವಾಗಿದೆ ಎಂದು ವಿಚಾರಿಸಿದಾಗ ಅದೇನು ಆಗಿದೆ ಎನ್ನುವ ಬಗ್ಗೆ ಬ್ಯಾಂಕ್ ಸಿಬ್ಬಂದಿ ಸಹ ಸುಳಿವು ಕೊಟ್ಟಿಲ್ಲ.
ಶಿವರಾಮ್ ಅವರ ಡಿಟ್ ಕಾರ್ಡ್ ವಿವರಗಳನ್ನು ಯಾರಾದರೂ ಕದ್ದಿರಬಹುದು ಎಂದು ಸಿಬ್ಬಂದಿ ಹೇಳಿದ್ದಾರೆ. . ಒಟಿಪಿ ಇಲ್ಲದೆ ಹಣವನ್ನು ಹೇಗೆ ವರ್ಗಾಯಿಸಬಹುದೆಂದು ಕೇಳಿದಾಗ, ಅವರು ಶಿವರಾಮ್ ಖಾತೆಯನ್ನು ಹ್ಯಾಕ್ ಮಾಡಿರಬಹುದು ಎಂದು ಸಿಬ್ಬಂದಿಗಳು ಸಮಜಾಯಿಶಿ ನೀಡಿದ್ದಾರೆ."ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ" ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಪತಿಯ ಚಿಕಿತ್ಸೆಗಾಗಿ ಇಟ್ಟಿದ್ದ ಹಣ ಎಗರಿಸಿದ ಕಳ್ಳರು!
ಇನ್ನೊಂದು ಪ್ರಕರಣದಲ್ಲಿ 68 ವರ್ಷದ ಮಹಿಳೆ ತನ್ನ ಗಂಡನ ಚಿಕಿತ್ಸೆಗಾಗಿ ಇಟ್ಟುಕೊಂಡಿದ್ದ 1.25 ಲಕ್ಷ ರೂ. ಅನ್ನು ವಂಚಕರು ಕಳವು ಮಾಡಿದ್ದಾರೆ. ವಿದ್ಯಾ ಆರ್ ರಾವ್ ಎಂಬ ಮಹಿಳೆ ಈ ಸಂಬಂಧ ಪುಟ್ಟೇನಹಳ್ಳಿ ಪೋಲೀಸರಿಗೆ ದೂರು ನೀಡಿದ್ದಾರೆ.
ಒಬ್ಬ ವ್ಯಕ್ತಿ, ಎಸ್ಬಿಐನ ಕಾರ್ಯನಿರ್ವಾಹಕನೆಂದು ಹೇಳಿಕೊಂಡು ಆಕೆಗೆ ಕರೆ ಮಾಡಿದ್ದಲ್ಲದೆ ಆಕೆಯ ಕಾರ್ಡ್ಗಳನ್ನು ನವೀಕರಿಸುವ ಅವಶ್ಯಕತೆಯಿದೆ ಎಂಬ ನೆಪವೊಡ್ಡಿ ಆಕೆಯ ಖಾತಾ ವಿವರ ಪಡೆದಿದ್ದಾನೆ. ಅದಾಗಿ ಸ್ವಲ್ಪ ಸಮಯದಲ್ಲೇ ರಾವ್ ಅವರ ಖಾತೆಯಿಂದ 75,000 ಮತ್ತು 50,000 ರೂ ಕಳವಾಗಿದೆ. ತಕ್ಷಣ ಬ್ಯಾಂಕ್ ಗೆ ತೆರಳಿದ ಮಹಿಳೆ ಕಾರ್ಡ್ ನಿಂದ ಹಣ ಡ್ರಾ ಆಗುವುದನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ "ಖಾತೆಯ ವಿವರ ಹಂಚಿಕೊಂಡದ್ದು ನಿಮ್ಮ ತಪ್ಪು, ಇದಕ್ಕೆ ನಾವೇನೂ ಂಆಡಲಾಗುವುದಿಲ್ಲ" ಎಂದು ಉತ್ತರಿಸಿದ್ದಾರೆ ಎಂದು ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
Advertisement