ಬೆಂಗಳೂರು: ಬೆಂಗಳೂರು ಹೊರವಲಯದ ಬೆಳ್ಳಂದೂರು, ಅಗರಾ ಮತ್ತು ವರ್ತೂರು ಕೆರೆಗಳ ಸ್ವಚ್ಚತೆ ಯೋಜನೆಗಳ ಜಾರಿಯಲ್ಲಿ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, 2020ರ ಸೆಪ್ಟೆಂಬರ್ ಒಳಗೆ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ ಸೇರಿದಂತೆ ಎಲ್ಲಾ ಯೋಜನೆಗಳ ಕೆಲಸವನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.
ಬುಧವಾರ ಮೂರು ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಿದ ನ್ಯಾಯಾಧೀಶ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪ್ರಧಾನ ಪೀಠ, ಸರ್ಕಾರ ಜಾರಿಗೆ ತರುವಂತ ಹಾಗೂ ಪ್ರಾಯೋಗಿಕವಾಗಿರುವಂತಹ ಯೋಜನೆಗಳನ್ನು ಜೂನ್ ತಿಂಗಳೊಳಗೆ ಜಾರಿಗೆ ತರಬೇಕು. 2020ರ ಸೆಪ್ಟೆಂಬರ್ ಗೆ ಮೊದಲೇ ಅವೆಲ್ಲಾ ಕಡ್ಡಾಯವಾಗಿ ಅನುಷ್ಠಾನಗೊಳ್ಳಬೇಕು ಎಂದು ನಿರ್ದೇಶಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಎರಡಕ್ಕಿಂತ ಹೆಚ್ಚು ವರ್ಷಗಳು ಬೇಕೆಂದಿದ್ದ ಬಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ತಜ್ಞರು ಹೇಳಿದಂತೆ ಕೆರೆಯೊಳಗೆ ತ್ಯಾಜ್ಯ ಸೇರದಂತೆ ಒಂಬತ್ತು ತಿಂಗಳೊಳಗೆ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಬೇಕು ಎಂದು ತಾಕೀತು ಮಾಡಿತು.
ಬಿಬಿಎಂಪಿ, ಬಿಡಬ್ಲ್ಯೂಎಸ್ ಎಸ್ ಬಿ ಮತ್ತು ಕೆಎಸ್ ಪಿಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನ ಪೀಠ, ಅಧಿಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಜನರು ತೊಂದರೆ ಅನುಭವಿಸಬಾರದು. ನಿರ್ಲಕ್ಷ್ಯ ಮನೋಭಾವದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ
Advertisement