ಬೆಂಗಳೂರು: ಇನ್ನು ಸದ್ಯದಲ್ಲಿಯೇ ಮಾರುಕಟ್ಟೆಯಲ್ಲಿ ಕೋಲಾರ ಟೊಮೆಟೊಕ್ಕೆ ಕೊರತೆಯಾಗಬಹುದು. ಅದಕ್ಕೆ ಕಾರಣ ಕರ್ನಾಟಕ ಕೃಷಿ ಬೆಲೆ ಆಯೋಗ ಟೊಮೆಟೊ ಬೆಳೆಯುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದೆ. ಅದರ ಬದಲಿಗೆ ಆಲೂಗಡ್ಡೆ ಅಥವಾ ಈರುಳ್ಳಿ, ಕಬ್ಬು, ಜೋಳ ಬೆಳೆಯುವಂತೆ ಹೇಳಿದೆ.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಅಂತರ್ಜಲ ಬತ್ತಿ ಹೋಗುತ್ತಿರುವುದು, ನೀರಿನ ಸಮಸ್ಯೆಯಿಂದಾಗಿ ಆಯೋಗ ರೈತರಿಗೆ ಈ ಸಲಹೆ ನೀಡಿದೆ. ಬೆಳೆ ಪ್ರದೇಶವನ್ನು ಬದಲಿಸುವಂತೆ ಆಯೋಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆದಿದೆ.
ಮೇ ತಿಂಗಳಿನಿಂದ ಆಗಸ್ಟ್ ವರೆಗೆ ಟೊಮೆಟೊ ಬೆಳೆಯ ಕಾಲವಾಗಿದೆ. ತಮಿಳು ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್ ಗಢ, ಕೇರಳ, ದೆಹಲಿ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಗಳಿಂದ ಟೊಮೆಟೊ ಪೂರೈಕೆಯಾಗುತ್ತದೆ.
ರಾಜ್ಯದ ಒಟ್ಟು 33 ಸಾವಿರ ಹೆಕ್ಟೇರ್ ಟೊಮೆಟೊ ಬೆಳೆ ಪ್ರದೇಶದಲ್ಲಿ 8 ಸಾವಿರ ಎಕರೆ ಕೋಲಾರದಲ್ಲಿ ಇರುತ್ತಿತ್ತು. ಪ್ರತಿವರ್ಷ ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಟನ್ ಟೊಮೆಟೊ ಬೆಳೆ ಬೆಳೆಯಲಾಗುತ್ತಿತ್ತು. ಟೊಮೆಟೊ ಬೆಳೆಗೆ ಅಧಿಕ ನೀರು ಬೇಕಾಗುತ್ತದೆ. ಆದರೆ ಕೋಲಾರ ಜಿಲ್ಲೆಯಲ್ಲಿ 2 ಸಾವಿರ ಅಡಿ ಆಳದವರೆಗೆ ಅಗೆದರೂ ನೀರು ಸಿಗುತ್ತಿಲ್ಲ, ಟೊಮೆಟೊಗೆ ಭಾರೀ ಬೇಡಿಕೆಯಿದೆ, ಆದರೆ ರೈತರು ನೀರಿಲ್ಲದೆ ಪರಿತಪಿಸುತ್ತಿದ್ದಾರೆ ಎಂದು ಬೆಲೆ ಆಯೋಗದ ಅಧ್ಯಕ್ಷ ಟಿ ಎನ್ ಪ್ರಕಾಶ್ ಕಮ್ಮರ್ಡಿ ಹೇಳುತ್ತಾರೆ.