ಬೆಂಗಳೂರು: ತೀವ್ರ ಅನಾರೋಗ್ಯದಿಂದ ಸೋಮವಾರ ವಿಧಿವಶರಾದ ಹಿರಿಯ ಸಾಹಿತಿ, ನಟ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್(81ವರ್ಷ) ಅವರ ಅಂತ್ಯಕ್ರಿಯೆಯನ್ನು ಯಾವುದೇ ಸರ್ಕಾರಿ ಗೌರವ ಮತ್ತು ವಿಧಿ ವಿಧಾನವಿಲ್ಲದೆ ಸರಳವಾಗಿ ನೆರವೇರಿಸಲಾಯಿತು.
ಇಂದು ಮಧ್ಯಾಹ್ನ ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅತ್ಯಂತ ಸರಳವಾಗಿ ಗಿರೀಶ್ ಕಾರ್ನಾಡ್ ಅವರ ಅಂತ್ಯಸಂಸ್ಕಾರ ನಡೆಯಿತು.
ಕಾರ್ನಾಡ್ ಅವರ ಕೊನೆಯ ಆಸೆಯಂತೆ ಹಿರಿಯ ಪುತ್ರ ರಘು ಕಾರ್ನಾಡ್ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅತ್ಯಂತ ಸರಳವಾಗಿ ಅಂತಿಮ ವಿಧಾನ ಮಾಡುವ ಮೂಲಕ ಕಾರ್ನಾಡ್ ಅವರ ಅಂತ್ಯಕ್ರಿಯೆಯನ್ನು ಕುಟುಂಬವರ್ಗ ನೆರವೇರಿಸಿತ್ತು. ಯಾವುದೇ ಸರ್ಕಾರಿ ಗೌರವ ಬೇಡ ಎಂದು ಕುಟುಂಬ ವರ್ಗದವರು ತಿಳಿಸಿದ್ದರು.
ಸರ್ಕಾರಿ ಗೌರವವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಸಚಿವ ಡಿಕೆ ಶಿವಕುಮಾರ್ ಅವರು ಮನವಿ ಮಾಡಿಕೊಂಡರೂ ಕೂಡಾ ಕುಟುಂಬ ವರ್ಗ ಅದಕ್ಕೆ ಒಪ್ಪದೆ, ಕಾರ್ನಾಡ್ ಅವರ ಅಂತಿಮ ಆಸೆಯಂತೆ ಸರಳವಾಗಿ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ಹೇಳಿದ್ದಾರೆ.