ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗುವುದು ಖಚಿತ: ಯಡಿಯೂರಪ್ಪ

ಆರ್ಥಿಕ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಿತ್ತು. ಆದರೆ ಕಾಂಗ್ರೆಸ್ ವೈಯಕ್ತಿಕ ಹಿತಾಸಕ್ತಿಗಾಗಿ, ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಕಾನೂನು....
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ  "ತುರ್ತು ಪರಿಸ್ಥಿತಿ ಒಂದು ಕರಾಳ ನೆನಪು" ಕಾರ್ಯಕ್ರಮ
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ "ತುರ್ತು ಪರಿಸ್ಥಿತಿ ಒಂದು ಕರಾಳ ನೆನಪು" ಕಾರ್ಯಕ್ರಮ
ಬೆಂಗಳೂರು: ಆರ್ಥಿಕ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಿತ್ತು. ಆದರೆ ಕಾಂಗ್ರೆಸ್ ವೈಯಕ್ತಿಕ ಹಿತಾಸಕ್ತಿಗಾಗಿ, ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಕಾನೂನು ದುರುಪಯೋಗ ಮಾಡಿಕೊಂಡು ತುರ್ತುಪರಿಸ್ಥಿತಿ ಹೇರಿತು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ. 
ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ‌ ಪರಿಸ್ಥಿತಿಯ‌ನ್ನು ನೋಡಿದರೆ ಕಾಂಗ್ರೆಸ್ ಮುಕ್ತ ಭಾರತ ಆಗುವುದು ಬಹತೇಕ ನನಸಾಗಲಿದೆ. ಸರ್ವಾಧಿಕಾರಿ ಮನೋಭಾವದ ಇಂದಿರಾಗಾಂಧಿ ಇಡೀ ದೇಶವನ್ನು‌ ಜೈಲಾಗಿ ಪರಿವರ್ತಿಸಿದರು ಎಂದು ಅವರು ಕಿಡಿಕಾರಿದರು. 
ಅಟಲ್‌ ಬಿಹಾರಿ ವಾಜಪೇಯಿ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಸಾವಿರಾರು ನಾಯಕರನ್ನು ಬಂಧಿಸಿ ಜೈಲಿಗೆ ಹಾಕಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಂತಹ ಸಂಘಟನೆ ಇಲ್ಲದಿದ್ದರೆ ದೇಶದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಪೊಲೀಸರ ಕಿರುಕುಳವನ್ನು ಅನುಭವಿಸಿದ ಕಷ್ಟ ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರು. 
ಜಯಪ್ರಕಾಶ್ ನಾರಾಯಣ್ ಅವರನ್ನು ಜೈಲಿನಲ್ಲಿಟ್ಟು ಕಿರುಕುಳ ಕೊಟ್ಟು ಪರೋಕ್ಷವಾಗಿ ಸಾಯಲು ಕಾರಣವಾದರು ಎಂದು ಆರೋಪಿಸಿದ ಬಿ ಎಸ್ ಯಡಿಯೂರಪ್ಪ, ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನ ಬೆಂಬಲಿಸಿದ್ದಾರೆ‌ ಎಂದು ಹೇಳಿದರು. 
ಪ್ರಜಾತಂತ್ರವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕಿದೆ, ಆಗಿನ ಸಮಯದಲ್ಲಿ ನನ್ನನ್ನು ಸಾಗರದ ಜೈಲಿಗೆ ಹಾಕಿ, ಬಳಿಕ ಬಳ್ಳಾರಿ ಹಾಕಿದ್ದರು. ಜೀವಾವಧಿ ಶಿಕ್ಷೆ ಅಪರಾಧಿಗಳಿಗೂ ಉಟ ತಿಂಡಿಯಲ್ಲಿ ಕಿರುಕುಳ ನೀಡಿದರು ಒಂದು ಕ್ಷಣ ಹೆಚ್ಚು ಕಡಿಮೆ ಆಗಿದ್ದರೆ ನಾನು ಕೂಡ ಬದುಕಿ ಉಳಿಯುತ್ತಿರಲಿಲ್ಲ ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. 
1975 ರ ಜೂನ್ 25 ರಂದು ದೇಶ ಎಂದೂ ಮರೆಯಲು ಸಾಧ್ಯವಿಲ್ಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ಯಾವುದನ್ನು ಮರೆಯಬಾರದು. ಮತ್ತೊಮ್ಮೆರಾಜ್ಯದಲ್ಲಿ ಕಾಂಗ್ರೆಸ್ ತಲೆ ಎತ್ತದಂತೆ ಮಾಡಬೇಕು ಎಂದು ಅವರು ಕರೆ ನೀಡಿದರು. 
ತಪ್ಪು ನಿರ್ಧಾರದ ಮೂಲಕ ಇಂದಿರಾ ಗಾಂಧಿ ಜನರ ಆಕ್ರೋಶಕ್ಕೆ ಗುರಿಯಾದರು, ಪ್ರಜಾತಂತ್ರ ವಿರುದ್ಧವಾದ ಯಾವುದೇ ಸಿದ್ಧಾಂತ ಶಾಶ್ವತವಾಗಿ ಉಳಿಯುವುದಿಲ್ಲ, ಇದಕ್ಕೆ ಕಾಂಗ್ರೆಸ್ ನ ಸದ್ಯದ ದಯನೀಯ ಸ್ಥಿತಿಯೇ ಉದಾಹರಣೆ ಎಂದು ಯಡಿಯೂರಪ್ಪ ಹೇಳಿದರು.
44 ವರ್ಷಗಳ ನಂತರ ತುರ್ತು ಪರಿಸ್ಥಿತಿ ಬಗ್ಗೆ ನಮ್ಮ ಯುವಕರಿಗೆ ಅರಿವು ಮೂಡಿಸಬೇಕಿದೆ. ಜನಾಭಿಪ್ರಾಯದ ವಿರುದ್ಧ ನಡೆದುಕೊಂಡರೆ ಏನಾಗಲಿದೆ ಎನ್ನುವುದಕ್ಕೆ ಕಾಂಗ್ರೆಸ್ ಉತ್ತಮ ಉದಾಹರಣೆ, ಇಂದು ವಿಪಕ್ಷ ಸ್ಥಾನವನ್ನು ಪಡೆಯಲಿಕ್ಕೂ ಆಗದ ದಾರುಣ ಸ್ಥಿತಿ ಆ ಪಕ್ಷಕ್ಕೆ ಬಂದಿದೆ ಎಂದರು.
ಪಕ್ಷದ ಮತ್ತೊಬ್ಬ ಮುಖಂಡ ಗೋ ಮಧುಸೂದನ್ ಮಾತನಾಡಿ, ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಜನ ಸಂಘಕ್ಕೆ ಹಿಂಸೆಯ ಮೇಲೆ ನಂಬಿಕೆಯಿಲ್ಲ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಸ್ಥಾ ಕಾಂಗ್ರೆಸ್ ನಲ್ಲಿದ್ದ ದೇವೇಗೌಡರು,‌ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದ್ದರು. ತುರ್ತು ಪರಿಸ್ಥಿತಿ ನಂತರ ಅದರ ಲಾಭ ಪಡೆಯದೇ ಇರುವ ಏಕೈಕ ಸಂಸ್ಥೆ ಯೆಂದರೆ ಆರ್ ಎಸ್ ಎಸ್ ಮಾತ್ರ ಎಂದು ದೇವೇಗೌಡರೇ ಬಹಿರಂಗವಾಗಿ ಹೇಳಿದ್ದರು‌. ಈಗ ಅದೇ ದೇವೇಗೌಡರು ಅದೇ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಅವರು ಲೇವಡಿ ಮಾಡಿದರು. 
ರಾಜ್ಯದಲ್ಲಿ ಈ ಪಾಪಿ ಕಾಂಗ್ರೆಸ್ ತೊಲಗಬೇಕು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಗೋ.ಮಧುಸೂಧನ್ ಹೇಳಿದರು.
ಗಾಂಧಿ ಪರಿವಾರದ ಹೆಣ್ಣುಮಗಳು ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದರು. ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ದುರ್ಗೆ ಎಂದು ಕರೆಸಿಕೊಂಡವರು ಭ್ರಷ್ಟಾಚಾರದ ಗಂಗೆಯಂತಾದರು ಎಂದು ಅವರ ನಿಲುವುಗಳನ್ನು ಮಧುಸೂದನ್ ಬಲವಾಗಿ ಖಂಡಿಸಿದರು.
ಅಂದು ಆರ್ ಎಸ್ ಎಸ್ , ಸಂಘಪರಿವಾರದ ಕಾರ್ಯಕರ್ತರು ಹೋರಾಟ ಮಾಡದೇ ಇದ್ದರೆ ತುರ್ತುಪರಿಸ್ಥಿತಿ ತೆಗೆಯುತ್ತಲೇ ಇರುತ್ತಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಬಂಧಿತರಾದವರಲ್ಲಿ ಶೇಕಡ 90ರಷ್ಟು ಆರ್ ಎಸ್ ಎಸ್ ಕಾರ್ಯಕರ್ತರು ಎಂದರು.
ಜನತಾ ಪರಿವಾರದಿಂದ ಆರ್ ಎಸ್ ಎಸ್ ನ್ನು ಹೊರಹಾಕಲಾಯಿತು, ಇದು ಸಮಾಜವಾದಿಗಳ ಪಿತೂರಿ. ಮನಸ್ಸು ಮಾಡಿದ್ದರೆ ಅಟಲ್ ಬಿಹಾರಿ ವಾಜಪೇಯಿಯವರು ಅಂದು ಪ್ರಧಾನಿಯಾಗಬಹುದಿತ್ತು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದವರು ಜನ ಸಂಘದವರು. ಆದರೂ ವಾಜಪೇಯಿಯವರು ಬೇಸರ ಪಡಲಿಲ್ಲ. ಬದಲಿಗೆ ಬಿಜೆಪಿ ಕಟ್ಟಿ ಬೆಳೆಸಿದರು. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ನೀಡಿರುವಂತೆ ತುರ್ತು‌ ಪರಿಸ್ಥಿತಿಯಲ್ಲಿ ಹೋರಾಟ ಮಾಡಿದವರಿಗೆ ಸೂಕ್ತ ಸೌಲಭ್ಯ ನೀಡುವ ಪ್ರಯತ್ನ ನಡೆಸಿದಾಗ ವ್ಯಾಪಕ‌ ವಿರೋಧ ವ್ಯಕ್ತವಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಮೈಸೂರಿಗೆ ಬಂದಿದ್ದರು‌, ಆಗ ಆರ್ ಎಸ್ ಎಸ್ ಕಾರ್ಯಕರ್ತರು ಅವರ ಮುಖದ ಮೇಲೆ ಕರಪತ್ರ ಎಸೆದಿದ್ದರು‌‌ ಎಂದು ಮಧುಸೂದನ್ ಹಳೆಯ ಘಟನಾವಳಿಗಳನ್ನು ಸ್ಮರಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com