ಐಟಿ ಮುಖ್ಯಸ್ಥ ಬಿಜೆಪಿಯ ಏಜೆಂಟ್, ಇಂತಹ ಪುಟಗೋಸಿಗಳಿಗೆಲ್ಲ ನಾವು ಹೆದರಲ್ಲ: ಹೆಚ್ ಡಿ ರೇವಣ್ಣ

ಮಂಡ್ಯ ಮತ್ತು ಹಾಸನಗಳಲ್ಲಿ ಜೆಡಿಎಸ್ ನಾಯಕರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ...
ಹೆಚ್ ಡಿ ರೇವಣ್ಣ
ಹೆಚ್ ಡಿ ರೇವಣ್ಣ
ಹಾಸನ: ಮಂಡ್ಯ ಮತ್ತು ಹಾಸನಗಳಲ್ಲಿ ಜೆಡಿಎಸ್ ನಾಯಕರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಐಟಿ ಇಲಾಖೆ ಮುಖ್ಯಸ್ಥ ಬಿ ಆರ್ ಬಾಲಕೃಷ್ಣ ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅವರು ಆ ಹುದ್ದೆಗೆ ಅನರ್ಹರು. ಯಾವುದೋ ಪುಟಗೋಸಿ ಐಟಿ ಚೀಫ್ ಇಟ್ಟುಕೊಂಡು ಹೆದರಿಸಲು ಹೊರಟರೆ ದೇವೇಗೌಡರ ಕುಟುಂಬ ಅಂತದ್ದಕ್ಕೆಲ್ಲ ಹೆದರುವುದಿಲ್ಲ. ಇವೆಲ್ಲ ನಮಗೆ ಹೊಸದೇನು ಅಲ್ಲ, ಇಷ್ಟು ವರ್ಷ ಇಂತವುಗಳನ್ನೆಲ್ಲ ಎದುರಿಸಿಕೊಂಡು ಬಂದಿದ್ದೇವೆ ಎಂದರು.
ಇಂದು ದಾಳಿ ಮಾಡಿದ ಇದೇ ಅಧಿಕಾರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಆಸ್ತಿ ಮೇಲೆ ದಾಳಿಯಾದ 24 ಗಂಟೆಗಳಲ್ಲಿಯೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಹಾಗಾದರೆ ಇದರ ಅರ್ಥವೇನು, ಕಾಯುತ್ತಿರಿ, ಇದಕ್ಕೆಲ್ಲ ಸಮಯ ಬರುತ್ತದೆ. ಇನ್ನು ಮುಂದೆ ಬಿಜೆಪಿಯ ಬಂಡವಾಳ ಹೊರಗೆ ಬರುತ್ತದೆ. ದೇವೇಗೌಡ ಕುಟುಂಬ ಇಂತಹ ಹಲವು ಐಟಿ, ಇಡಿ ಮತ್ತು ಸಿಬಿಐ ದಾಳಿಗಳನ್ನು ಎದುರಿಸಿದೆ. ಎನ್ ಡಿಎ ಮತ್ತು ಪ್ರಧಾನಿ ಮೋದಿಯವರು ಇಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾಳೆ ದಿನ ಐಟಿ ಮುಖ್ಯಸ್ಥನನ್ನು ಬಿಜೆಪಿ ಸದಸ್ಯನಾಗಿ ಮಾಡಿ ಸಂಸತ್ತು ಸದಸ್ಯನಾಗಿ ಮಾಡಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ರೇವಣ್ಣ ವ್ಯಂಗ್ಯವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com