ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನದ ಪೈಲಟ್ ಸಮವಸ್ತ್ರ ಧರಿಸಿ ತೇಜಸ್ನ ಕೋ-ಪೈಲಟ್ ಸ್ಥಾನದಲ್ಲಿ ಕುಳಿತು ಹಾರಾಟ ನಡೆಸಿದರು. ಆ ಮೂಲಕ ಭಾರತದ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ದೇಶದ ಮೊದಲ ರಕ್ಷಣಾ ಸಚಿವರು ಎಂಬ ಕೀರ್ತಿಗೆ ರಾಜನಾಥ್ ಸಿಂಗ್ ಭಾಜನರಾಗಿದ್ದಾರೆ.
ಇದೇ ವೇಳೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಉತ್ಪನ್ನಗಳ ಪ್ರದರ್ಶನದಲ್ಲಿಯೂ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ತೇಜಸ್ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಕಳೆದ 2016ರ ಜುಲೈನಲ್ಲೇ ಭಾರತೀಯ ಸೇನೆಗೆ ಮಿಗ್-21 ಬದಲಿಗೆ ತೇಜಸ್ ಯುದ್ಧ ವಿಮಾನವನ್ನು ವಿನಿಯೋಗಿಸಲಾಯಿತು. ಇದು 3,500 ಕೆಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ.
ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ದ ವಿಮಾನ ಇದಾಗಿದೆ. ಸಂಪೂರ್ಣ ದೇಶಿ ತಂತ್ರಜ್ಞಾನ ಬಳಸಿ ಯುದ್ದ ವಿಮಾನ ತೇಜಸ್ ತಯಾರಿಸಲಾಗಿದ್ದು, ಪ್ರತಿ ಗಂಟೆಗೆ 1350 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿದೆ.
ಈ ಹಿಂದೆ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ ಎರಡು ಸೀಟರ್ ಗಳ ಯುದ್ಧ ವಿಮಾನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಾರಾಟ ನಡೆಸಿ ಯುದ್ಧ ವಿಮಾನದ ವೇಗದ ಅನುಭವ ಪಡೆದಿದ್ದರು.
ಇದಕ್ಕೂ ಮುನ್ನ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಅವರು ಕೂಡ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದ್ದರು.
Advertisement